ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸಂದೀಪ್ ದೀಕ್ಷಿತ್ ಅವರ ಪರವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನವರಿ 20ರಂದು ಪ್ರಚಾರ ನಡೆಸಲಿದ್ದಾರೆ.
ಇದು, ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತಾರೂಢ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಕ್ಷೇತ್ರವಾಗಿದೆ.
ಕೇಜ್ರಿವಾಲ್ಗೆ ಸೋಲುಣಿಸಲು ಪಣ ತೊಟ್ಟಿರುವ ಕಾಂಗ್ರೆಸ್, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಪುತ್ರ, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ.
ಕೇಜ್ರಿವಾಲ್ ಅವರು ಇದೇ ಕ್ಷೇತ್ರದಲ್ಲಿ 2013ರಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರಿದಂದ ಶೀಲಾ ಅವರನ್ನು ಸೋಲಿಸಿದ್ದರು. 2015ರ ವೇಳೆಗೆ ಜಯದ ಅಂತರವನ್ನು 31 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದ ಅವರಿಗೆ, 2020ರಲ್ಲಿ ಅಲ್ಪ ಹಿನ್ನಡೆಯಾಗಿತ್ತು. ಗೆಲುವಿನ ಅಂತರ 21 ಸಾವಿರಕ್ಕೆ ಕುಸಿದಿತ್ತು.
ಕಳೆದ ಎರಡೂ ಚುನಾವಣೆಗಳಲ್ಲಿ 25 ಸಾವಿರಕ್ಕಿಂತ ಹೆಚ್ಚು ಮತ ಗಳಿಸಿರುವ ಬಿಜೆಪಿ, ರಣತಂತ್ರಗಳನ್ನು ಹೆಣೆಯುತ್ತಿದೆ. ಆದರೆ, 2020ರಲ್ಲಿ ಕೇವಲ 3,220 ಮತ ಪಡೆದಿರುವ ಕಾಂಗ್ರೆಸ್ ಏನೆಲ್ಲ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ನಿನ್ನೆಯೇ (ಗುರುವಾರ) ಅಂತಿಮ ದಿನವಾಗಿದ್ದು, ಇಂದು ಪರಿಶೀಲನೆ ನಡೆಯಲಿದೆ. 841 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹಿಂಪಡೆಯಲು ಸೋಮವಾರದ (ಜ.20) ವರೆಗೆ ಸಮಯವಿದೆ. ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.