
ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರನ್ನು ನೋಡಲು ಸಾಧ್ಯವಾಗದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಶನಿವಾರ ದಾಂದಲೆ ನಡೆಸಿದರು
ಪಿಟಿಐ ಚಿತ್ರ
ಕೋಲ್ಕತ್ತ: ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮವು ಗೊಂದಲದ ಗೂಡಾಗಿ, ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದಕ್ಕಾಗಿ ಆಯೋಜಕರ ವಿರುದ್ಧ ಆಡಳಿತಾರೂಧ ಟಿಎಂಸಿ, ವಿಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಶನಿವಾರ ಹರಿಹಾಯ್ದಿವೆ.
‘ಪಶ್ಚಿಮ ಬಂಗಾಳ ಪಾಲಿಗೆ ಇದು ಕರಾಳ ದಿನ’ ಎಂದು ಸಿಪಿಎಂ ಟೀಕಿಸಿದೆ.
‘ಕಾರ್ಯಕ್ರಮ ಆಯೋಜಕರ ಅತ್ಯುತ್ಸಾಹ, ಅವರ ಆಪ್ತರು ಮೆಸ್ಸಿ ಅವರನ್ನು ಸುತ್ತುವರಿದರು. ಅವರೊಂದಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಂದಾದರು. ಇದರಿಂದ ಮೆಸ್ಸಿ ಅವರನ್ನು ನೋಡಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿದವರಿಗೆ ಸಮಸ್ಯೆಯಾಯಿತು’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಣ ಗಳಿಸುವ ದುರಾಸೆಯಿಂದ ಕೆಲ ವಂಚಕರು ಇಂತಹ ಸನ್ನಿವೇಶ ಸೃಷ್ಟಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಈ ಘಟನೆ ರಾಜ್ಯದ ಹೆಸರಿಗೆ ಕಳಂಕ ತಂದಿದೆ.–ಸಮಿಕ್ ಭಟ್ಟಾಚಾರ್ಯ, ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ
ವಿಶ್ವದ ಮುಂದೆ ಪಶ್ಚಿಮ ಬಂಗಾಳದ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ನೈತಿಕ ಹೊಣೆ ಹೊತ್ತು ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.–ಸುವೇಂದು ಅಧಿಕಾರಿ, ವಿಧಾನಸಭೆಯಲ್ಲಿ ವಿಪಕ್ಷ ನಾಯಕ
ಮೆಸ್ಸಿ ಕಾರ್ಯಕ್ರಮದ ಹೆಸರಿನಲ್ಲಿ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಮೆಸ್ಸಿ ಅವರನ್ನು ಟಿಎಂಸಿ ನಾಯಕರು ಹಾಗೂ ಅವರ ಕುಟುಂಬಗಳ ಸದಸ್ಯರೇ ಸುತ್ತುವರಿದಿದ್ದರಿಂದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಆಗಲಿಲ್ಲ.–ಶುಭಂಕರ ಸರ್ಕಾರ್, ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ
ಕಾನೂನು–ಸುವ್ಯವಸ್ಥೆ ಕುಸಿದಿದ್ದು, ಇದಕ್ಕೆ ಟಿಎಂಸಿ ನೇತೃತ್ವದ ಸರ್ಕಾರವೇ ಕಾರಣ. ಈ ದಾಂದಲೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.–ಸುಜನ್ ಚಕ್ರವರ್ತಿ, ಸಿಪಿಎಂ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.