ADVERTISEMENT

ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಸೇನೆ ಕಣ್ಣು: ಅಧಿಕಾರದ ಸಮಾನ ಹಂಚಿಕೆಗೂ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 7:44 IST
Last Updated 24 ಅಕ್ಟೋಬರ್ 2019, 7:44 IST
   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಬಹುಮತ ಗಳಿಸುತ್ತಿದ್ದಂತೆ ಮೈತ್ರಿ ಕೂಟದಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಆರಂಭವಾಗಿದೆ. ಜತೆಗೆ ಅಧಿಕಾರದ ಸಮಾನ ಹಂಚಿಕೆಯಾಬೇಕೆಂಬ ಒತ್ತಾಯಗಳು ಸೇನಾ ಪಾಳಯದಿಂದ ಕೇಳಿ ಬಂದಿದೆ.

ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿವಸೇನೆಯ ಹಿರಿಯ ನಾಯಕ, ಸಾಮ್ನಾದ ಮಾಜಿ ಸಂಪಾದಕ ಸಂಜಯ್‌ ರಾವತ್‌, ಚುನಾವಣೆಗೆ ಮೊದಲು ಮಾಡಿಕೊಂಡಿದ್ದ ಒಪ್ಪಂದದಂತೆಯೇ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಚುನಾವಣೆಗೂ ಮೊದಲೇ ನಾವು ಸರ್ಕಾರದಲ್ಲಿ ಸಮಪಾಲು ಕೋರಿದ್ದೆವು. 50:50 ಸೂತ್ರದಂತೆ ಸರ್ಕಾರ ರಚನೆ ಆಗುತ್ತದೆ. ಉದ್ಧವ್ ಠಾಕ್ರೆ ಅವರನ್ನು ಬೇಟಿಯಾಗಿ ಚರ್ಚಿಸುತ್ತೇನೆ. ನಮ್ಮ ಪಕ್ಷದ ಸಾಧನೆಯು ತೆಗೆದುಹಾಕುವಂಥದ್ದಲ್ಲ ಎಂದು ಅವರು ಹೇಳಿದರು.

ADVERTISEMENT

ಈ ನಡುವೆ, ‘ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆಗೆ ಸಿಗಲಿದೆ,’ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಡಾ.ಮನೋಹರ್ ಜೋಶಿ ಘೋಷಿಸಿದ್ದಾರೆ.

ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಕಡಿಮೆ ಸ್ಥಾನಗಳನ್ನು ಗೆದ್ದಿದೆ. 2014ರ ಚುನಾವಣೆಯಲ್ಲಿ ಅದು 122 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ, ಈ ಬಾರಿ ಅದು 102 ಸ್ಥಾನಗಳಲ್ಲಷ್ಟೇ ಮುನ್ನಡೆ ಹೊಂದಿದೆ. ಅಧಿಕಾರ ಹಂಚಿಕೆಯ ವೇಳೆ ಶಿವಸೇನೆ ಇದೇ ವಾದವನ್ನು ಮುಂದು ಮಾಡುವ ಸಾಧ್ಯತೆಗಳೂ ಇವೆ. ಇನ್ನೊಂದೆಡೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟೇ ಶಿವಸೇನೆ ವರಿಷ್ಠರು ತಮ್ಮ ಕುಟುಂಬದ ಕುಡಿಯನ್ನು ಚುನಾವಣೆ ಕಣಕ್ಕಿಳಿಸಿದ್ದರೇ ಎಂಬ ಪ್ರಶ್ನೆಗಳೂ ಉದ್ಭವವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.