ಮಲ್ಲಿಕಾರ್ಜುನ ಖರ್ಗೆ
(ಪಿಟಿಐ ಚಿತ್ರ)
ನವದೆಹಲಿ: 'ಭಾರತದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆಧಾರರಹಿತ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿಯೇ ಇರುತ್ತಾರೆಯೇ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಗುರುವಾರ) ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, 'ದೇಶ ಮೊದಲು, ನಾವು ಯಾವಾಗಲೂ ದೇಶದ ಹಿತಾಸಕ್ತಿಯೊಂದಿಗೆ ಇದ್ದೇವೆ' ಎಂದು ಹೇಳಿದ್ದಾರೆ.
'ಟ್ರಂಪ್ ಅವರ ಭಾರತ-ಪಾಕಿಸ್ತಾನ ಕದನ ವಿರಾಮ ಹೇಳಿಕೆಯ ಕುರಿತು ಪ್ರಧಾನಿ ಮೋದಿ 'ಮೌನ ವ್ರತ' ವಹಿಸಿದ್ದರು' ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
ಆಗಸ್ಟ್ 1ರಿಂದ ಭಾರತದ ಮೇಲೆ ಶೇ 25ರಷ್ಟು ಸುಂಕ ಹಾಗೂ ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದೂ ಹೇಳಿದ್ದರು.
'ಸುಂಕ ಹೇರಿಕೆಯು ದೇಶದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಎಂಎಸ್ಎಂಇ ಸೇರಿದಂತೆ ಕೈಗಾರಿಕೆಗಳು ನಷ್ಟ ಅನುಭವಿಸಲಿವೆ. ನಿಮ್ಮ ಸಚಿವರು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸಿದ್ದರು. ಕೆಲವರು ಹಲವು ದಿನಗಳಿಂದ ವಾಷಿಂಗ್ಟನ್ನಲ್ಲಿ ಬೀಡು ಬಿಟ್ಟಿದ್ದರು' ಎಂದು ಖರ್ಗೆ ತಿಳಿಸಿದ್ದಾರೆ.
'ನಿಮ್ಮ ಸ್ನೇಹಕ್ಕೆ 'ನಮಸ್ತೆ ಟ್ರಂಪ್' 'ಅಬ್ಕೀ ಬಾರ್ ಟ್ರಂಪ್ ಸರ್ಕಾರ' ನೀಡಿದ ಪುರಸ್ಕಾರ ಇದೇನಾ' ಎಂದು ಪ್ರಶ್ನಿಸಿದ್ದಾರೆ.
'ರಷ್ಯಾದಿಂದ ತೈಲ ಆಮದು, ಶಸ್ತ್ರಾಸ್ತ್ರ ಖರೀದಿ ಮತ್ತು ಬ್ರಿಕ್ಸ್ ಸದಸ್ಯತ್ವಕ್ಕಾಗಿ ಭಾರತದ ಮೇಲೆ ಸುಂಕ ಹೇರುವುದಾಗಿ ಟ್ರಂಪ್ ಹೇಳಿದ್ದಾರೆ. ಇದು ದೇಶದ ರಾಷ್ಟ್ರೀಯ ನೀತಿಗೆ ಎದುರಾದ ದೊಡ್ಡ ಹೊಡೆತ' ಎಂದು ಅವರು ಹೇಳಿದ್ದಾರೆ.
'ಪಾಕಿಸ್ತಾನದೊಂದಿಗೆ ತೈಲ ನಿಕ್ಷೇಪಗಳ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಅವರು ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆಯೇ? ಅಮೆರಿಕ-ಚೀನಾ-ಪಾಕಿಸ್ತಾನ ನಡುವಣ ಈ ಹೊಸ ಸಹಕಾರವು ತೀವ್ರ ಕಳವಳಕಾರಿಯಾಗಿದೆ. ಪಿಆರ್ ಬಗ್ಗೆ ಯೋಚಿಸುವ ಬದಲು ಮೋದಿ ಸರ್ಕಾರ ದೇಶದ ಬಗ್ಗೆ ಯೋಚಿಸಬೇಕು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.