ರಾಣಾನನ್ನು ಬಂಧಿಸಿ ಕರೆತಂದಿದ್ದ ಎನ್ಐಎ ಅಧಿಕಾರಿಗಳು
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ (26/11) ಆರೋಪಿ ತಹವ್ವುರ್ ರಾಣಾಗೆ ಕುಟುಂಬ ಸದಸ್ಯರ ಬಳಿ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ದೆಹಲಿ ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.
ತಿಹಾರ್ ಜೈಲಿನ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಾಣಾ ದೂರವಾಣಿ ಕರೆ ಮಾಡಬಹುದು ಎಂದು ವಿಶೇಷ ನ್ಯಾಯಾಧೀಶ ಚಂದೆರ್ ಜಿತ್ ಸಿಂಗ್ ಸೂಚಿಸಿದ್ದಾರೆ.
ನಿಯಮಿತವಾಗಿ ಕುಟುಂಬ ಸದಸ್ಯರಿಗೆ ಕರೆ ಮಾಡಲು ಅವಕಾಶ ನೀಡಬೇಕೆ ಎನ್ನುವ ಬಗ್ಗೆ ಜೈಲು ಅಧಿಕಾರಿಗಳು ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಇದರ ಜತೆಗೆ ರಾಣಾ ಆರೋಗ್ಯದ ಕುರಿತು 10 ದಿನಗಳಲ್ಲಿ ವರದಿ ನೀಡುವಂತೆ ಕೇಳಿದೆ.
ರಾಣಾನನ್ನು ಅಮೆರಿಕವು ಏಪ್ರಿಲ್ನಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು. ಬಳಿಕ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
2008ರ ನವೆಂಬರ್ 26ರಂದು ಅರಬ್ಬಿ ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿದ್ದ 10 ಮಂದಿ ಉಗ್ರರ ತಂಡ, ರೈಲು ನಿಲ್ದಾಣ, ಎರಡು ಐಷಾರಾಮಿ ಹೋಟೆಲ್ ಹಾಗೂ ಯಹೂದಿ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಸುಮಾರು 60 ಗಂಟೆ ದಾಳಿ ನಡೆಸಿದ್ದ ಅವರು 166 ಮಂದಿಯನ್ನು ಕೊಂದು ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.