ADVERTISEMENT

ಭರೂಚ್‌ನಿಂದ AAP ಕಣಕ್ಕೆ: ಕ್ಷಮೆ ಕೋರಿದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಪುತ್ರಿ

ಇ.ಎಸ್.ಸುಧೀಂದ್ರ ಪ್ರಸಾದ್
Published 24 ಫೆಬ್ರುವರಿ 2024, 9:54 IST
Last Updated 24 ಫೆಬ್ರುವರಿ 2024, 9:54 IST
<div class="paragraphs"><p>ರಾಹುಲ್ ಗಾಂಧಿಯೊಂದಿಗೆ ಮುಮ್ತಾಜ್ ಪಟೇಲ್</p></div>

ರಾಹುಲ್ ಗಾಂಧಿಯೊಂದಿಗೆ ಮುಮ್ತಾಜ್ ಪಟೇಲ್

   

@mumtazpatels ಎಕ್ಸ್ ಖಾತೆ ಚಿತ್ರ

ನವದೆಹಲಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ಭಾಗವಾಗಿ ಗುಜರಾತ್‌ನ ಭರೂಚ್‌ ಲೋಕಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ (ಎಎಪಿ)ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು, ಇದಕ್ಕಾಗಿ ಮುಮ್ತಾಜ್ ಪಟೇಲ್ ಅವರು ಕ್ಷೇತ್ರದ ಜನರ ಕ್ಷಮೆ ಕೋರಿದ್ದಾರೆ.

ADVERTISEMENT

ಭರೂಚ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಗಾಂಧಿ ಕುಟುಂಬದ ಆಪ್ತ ಅಹ್ಮದ್ ಪಟೇಲ್ ಅವರ ನಿಧನದ ನಂತರ ಅವರ ಪುತ್ರಿ ಮುಮ್ತಾಜ್ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಬಾರಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಬರೂಚ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.

ಇದರ ಭಾಗವಾಗಿ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಮ್ತಾಜ್ ಕೂಡಾ ಪಾಲ್ಗೊಂಡಿದ್ದರು. ‘ಅಹ್ಮದ್ ಪಟೇಲ್ ಅವರ ಹಿಡಿತದಲ್ಲಿದ್ದ ಭರೂಚ್ ಕ್ಷೇತ್ರವನ್ನು ಈ ಬಾರಿ ಎಎಪಿಗೆ ನೀಡಲಾಗಿದೆ. ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಭರೂಚ್‌ ಕ್ಷೇತ್ರದಲ್ಲಿ ಕೇಡರ್‌ ಮಟ್ಟದಲ್ಲಿ ಕೆಲಸ ಮಾಡಲಿದ್ದೇನೆ’ ಎಂದು ಮುಮ್ತಾಜ್ ಹೇಳಿದ್ದಾರೆ.

‘ಮೈತ್ರಿಯ ನಂತರವೂ ಭರೂಚ್ ಕ್ಷೇತ್ರವನ್ನು ಉಳಿಸಿಕೊಳ್ಳಲಾರದ್ದಕ್ಕೆ ಜಿಲ್ಲಾ ಮಟ್ಟದ ಪಕ್ಷದ ಮುಖಂಡರಲ್ಲಿ ಕ್ಷಮೆ ಕೋರುತ್ತೇನೆ. ನಿಮ್ಮ ಅಸಮಾಧಾನವನ್ನು ನಾನು ವರಿಷ್ಠರಿಗೆ ತಿಳಿಸುತ್ತೇನೆ. ಆದರೆ ಎಲ್ಲರೂ ಜತೆಗೂಡಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ಅಹ್ಮದ್ ಪಟೇಲ್ ಅವರು 45 ವರ್ಷಗಳ ಕಾಲ ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸೋಣ’ ಎಂದಿದ್ದಾರೆ.

ಮುಮ್ತಾಜ್ ಅವರಂತೆಯೇ ಅವರ ಸೋದರ ಫೈಸಲ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಭರೂಚ್ ಕ್ಷೇತ್ರವನ್ನು ಎಎಪಿಗೆ ಬಿಟ್ಟುಕೊಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಫೈಸಲ್ ಪುನರುಚ್ಚರಿಸಿದ್ದರು. ಆದರೆ ಸೀಟು ಹಂಚಿಕೆ ನಿರ್ಧಾರವನ್ನು ಪಕ್ಷದ ಮುಖಂಡರಿಗೆ ಬಿಟ್ಟಿರುವುದಾಗಿ ತಿಳಿಸಿದ್ದರು.

ಭರೂಚ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಹ್ಮದ್ ಪಟೇಲ್ ಅವರು 1977, 1980, 1984, 1989ರಲ್ಲಿ ಜಯ ಸಾಧಿಸಿದ್ದರು. ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಿತು. 1998ರಿಂದ ಮುನ್ಸುಕ್‌ಭಾಯ್‌ ವಾಸವ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಗುಜರಾತ್‌ನಲ್ಲಿ ಕಾಂಗ್ರೆಸ್–ಎಎಪಿ ಮೈತ್ರಿ

ಗುಜರಾತ್‌ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ 24ರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಭರೂಚ್ ಹಾಗೂ ಭಾವನಗರ ಕ್ಷೇತ್ರಗಳನ್ನು ಎಎಪಿಗೆ ಬಿಟ್ಟುಕೊಟ್ಟಿದೆ.

ಸದ್ಯ ಬರೂಚ್‌ನಿಂದ ಎಎಪಿ ಶಾಸಕ ಹಾಗೂ ಬುಡಕಟ್ಟು ನಾಯಕ ಚೈತಾರ್ ವಾಸವ ಅವರು ಲೋಸಕಭಾ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ.

ದೆಹಲಿಯಲ್ಲೂ ಎಎಪಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಏಳು ಕ್ಷೇತ್ರಗಳಲ್ಲಿ ಮೂರನ್ನು ಕಾಂಗ್ರೆಸ್‌ ಪಡೆದುಕೊಂಡಿದೆ. 4ರಲ್ಲಿ ಎಎಪಿ ಸ್ಪರ್ಧಿಸಲಿದೆ. ಇದರಲ್ಲಿ ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿ ಕ್ಷೇತ್ರಗಳಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ ಹಾಗೂ ವಾಯವ್ಯ ದೆಹಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

ಹರಿಯಾಣದ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ 9ರಲ್ಲಿ ಹಾಗೂ ಎಎಪಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.