ADVERTISEMENT

ಮುಸ್ಲಿಮರು ಭಾರತದಲ್ಲಿ ಬಹುಸಂಖ್ಯಾತರಾಗಲು ಸಾಧ್ಯವಿಲ್ಲ ಎಂದ ದಿಗ್ವಿಜಯ್ ಸಿಂಗ್

ಪಿಟಿಐ
Published 7 ಸೆಪ್ಟೆಂಬರ್ 2021, 16:44 IST
Last Updated 7 ಸೆಪ್ಟೆಂಬರ್ 2021, 16:44 IST
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್   

ಇಂದೋರ್: ದೇಶದಲ್ಲಿ ಮುಸ್ಲಿಮರ ಫಲವತ್ತತೆ ಕುಸಿದಿದೆ. ಹೀಗಾಗಿ ಅವರು ಭಾರತದಲ್ಲಿ ಹಿಂದೂಗಳನ್ನು ಮೀರಿಸಿ ಬಹುಸಂಖ್ಯಾತರಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಎಡಪಕ್ಷಗಳು ಜಂಟಿಯಾಗಿ ಆಯೋಜಿಸಿದ್ದ ‘ಕೋಮು ಸಾಮರಸ್ಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ರಾವಣ ಮತ್ತು ಆತನ ಹತ್ತು ತಲೆಗಳನ್ನು ಹೋಲಿಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದಾರೆ.

‘ಒಂದೆಡೆ ಸಂಘದ ಸ್ವಯಂಸೇವಕರು ಕೋಮುವಾದದ ವಿಷ ಹರಡುತ್ತಿದ್ದರೆ ಮತ್ತೊಂದೆಡೆ ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂಗಳು ಮತ್ತು ಮುಸ್ಲಿಮರ ಡಿಎನ್‌ಎ ಒಂದೇ ಎನ್ನುತ್ತಿದ್ದಾರೆ. ಈ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮೋಹನ್ ಭಾಗವತ್ ಅವರಿಗೆ ಸವಾಲು ಹಾಕುತ್ತಿದ್ದೇನೆ’ ಎಂದು ದಿಗ್ವಿಜಯ್ ಹೇಳಿದ್ದಾರೆ.

ಸಂಘ ಪರಿವಾರ ಮತ್ತು ಅದರೊಂದಿಗೆ ನಂಟು ಹೊಂದಿರುವ ಜನರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

‘ಬಹುಪತ್ನಿತ್ವದ ಮೂಲಕ ಮುಸ್ಲಿಮರ ಜನಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಅವರು ಭಾರತದಲ್ಲಿ ಬಹುಸಂಖ್ಯಾತ ಸಮುದಾಯವಾಗುತ್ತಾರೆ ಮತ್ತು ಮುಂದಿನ 10 ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ನಿರಂತರವಾಗಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ’ ಎಂದು ಬಲಪಂಥೀಯ ನಾಯಕರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

‘ಈ ವಿಚಾರವಾಗಿ ಮೋಹನ್ ಭಾಗವತ್ ಮತ್ತು ಆರ್‌ಎಸ್‌ಎಸ್‌ನ ಪ್ರಚಾರಕರನ್ನು ಮುಕ್ತ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಮುಸ್ಲಿಮರ ಫಲವತ್ತತೆ ಕುಸಿಯುತ್ತಿದೆ. ಈ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಲು ಸಾಧ್ಯವೇ ಇಲ್ಲ ಎಂಬುದನ್ನು ಸಾಬೀತುಪಡಿಸಬಲ್ಲೆ’ ಎಂದು ದಿಗ್ವಿಜಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.