ADVERTISEMENT

ಎನ್‌ಸಿಪಿ, ಬಿಜೆಡಿಯಿಂದ ಬಿಜೆಪಿಯೂ ಪಾಠ ಕಲಿಯಬೇಕು: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಪ್ರತಿಪಕ್ಷಗಳ ಬಗ್ಗೆ ಪ್ರಧಾನಿ ಶ್ಲಾಘನೆ

ಏಜೆನ್ಸೀಸ್
Published 18 ನವೆಂಬರ್ 2019, 12:20 IST
Last Updated 18 ನವೆಂಬರ್ 2019, 12:20 IST
   

ನವದೆಹಲಿ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಬಿಜು ಜನತಾ ದಳದಿಂದ (ಬಿಜೆಡಿ) ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪಾಠ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸೋಮವಾರ ಹೇಳಿದರು.

ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಮಾತನಾಡಿದ ಅವರು ಸಂಸದೀಯ ಆದರ್ಶಗಳಿಗೆ ಬದ್ಧವಾಗಿರುವುದಕ್ಕಾಗಿ ಉಭಯ ಪಕ್ಷಗಳನ್ನು ಶ್ಲಾಘಿಸಿದರು.

‘ಸದನದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ನಡೆಸದೇ ಇರುವ ಮೂಲಕವೂ ಜನರ ಹೃದಯಗಳನ್ನು ಗೆಲ್ಲಬಹುದು. ಇಂದು ನಾನು ಎರಡು ಪಕ್ಷಗಳನ್ನು ಶ್ಲಾಘಿಸಲು ಬಯಸುತ್ತೇನೆ, ಅವುಗಳೆಂದರೆ ಎನ್‌ಸಿಪಿ ಮತ್ತು ಬಿಜೆಡಿ. ಈ ಪಕ್ಷಗಳುಸಂಸದೀಯ ಆದರ್ಶಗಳಿಗೆ ಬದ್ಧವಾಗಿವೆ. ಈ ಪಕ್ಷಗಳ ಸದಸ್ಯರು ಎಂದಿಗೂಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ನಡೆಸಿಲ್ಲ. ಆದರೂ ಅವರು ತಮ್ಮ ವಿಷಯಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ. ಇದರಿಂದ ನನ್ನ ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪಾಠ ಕಲಿಯಬೇಕು’ ಎಂದು ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆಗೂಡಿ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ನಕಾರಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮೋದಿ ಅವರಿಂದ ಈ ಹೊಗಳಿಕೆ ವ್ಯಕ್ತವಾಗಿದೆ.

‘ಬಿಜೆಪಿ–ಶಿವಸೇನಾ ಚುನಾವಣೆಯಲ್ಲಿ ಜತೆಯಾಗಿ ಸ್ಪರ್ಧಿಸಿವೆ. ಎನ್‌ಸಿಪಿ–ಕಾಂಗ್ರೆಸ್ ಜತೆಯಾಗಿ ಸ್ಪರ್ಧಿಸಿದ್ದೇವೆ. ಹೀಗಾಗಿ ಅವರ ದಾರಿ ಅವರು ನೋಡಿಕೊಳ್ಳಲಿ. ನಮ್ಮ ರಾಜಕೀಯ ನಾವು ಮಾಡುತ್ತೇವೆ’ ಎಂದುಸಂಸತ್ ಭವನದಲ್ಲಿ ಶರದ್ ಪವಾರ್ ಸೋಮವಾರ ಮಧ್ಯಾಹ್ನ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.