ಶುಭಾಂಶು ಶುಕ್ಲಾ ಅಂತರಿಕ್ಷಯಾನ ಮತ್ತೆ ಮುಂದೂಡಿಕೆ
ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಕಾರ್ಯಾಚರಣೆಯ ಉಡಾವಣೆಯನ್ನು ನಾಸಾ ಮುಂದೂಡಿದೆ.
‘ಜೂನ್ 22, ಭಾನುವಾರದಂದು ಯೋಜಿಸಿದ್ದ ಉಡಾವಣೆಯಿಂದ ಹಿಂದೆ ಸರಿಯಲು ನಾಸಾ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಹೊಸ ಉಡಾವಣಾ ದಿನಾಂಕವನ್ನು ನಿಗದಿಪಡಿಸಲಿದೆ’ ಎಂದು ಆಕ್ಸಿಯಮ್ ಸ್ಪೇಸ್ ಹೇಳಿಕೆಯಲ್ಲಿ ತಿಳಿಸಿದೆ.
ಉದ್ದೇಶಿತ ಉಡಾವಣಾ ದಿನಾಂಕದಲ್ಲಿನ ಬದಲಾವಣೆಯು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜ್ವೆಜ್ಡಾ ಸರವಿಸ್ ಮಾಡ್ಯೂಲ್ನ ಇತ್ತೀಚಿನ ದುರಸ್ತಿ ಕಾರ್ಯಗಳ ನಂತರ ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಸಮಯದ ಅಗತ್ಯವಿದೆ ಎಂದು ಅದು ಹೇಳಿದೆ.
ಮೊದಲು ಜೂನ್ 11 ರಂದು ದಿನಾಂಕ ನಿಗದಿಪಡಿಸಲಾಗಿತ್ತು, ಅದರಂತೆ ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಫಾಲ್ಕನ್–9 ರಾಕೆಟ್ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ, ರಾಕೆಟ್ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಗಿತ್ತು.
ಉಡಾವಣೆ ಹಲವು ಬಾರಿ ಮುಂದೂಡಿಕೆ ಬಳಿಕ ಜೂನ್ 22ಕ್ಕೆ ಮತ್ತೆ ಸಮಯ ನಿಗದಿ ಮಾಡಲಾಗಿತ್ತು. ಇದೀಗ, ಆ ಸಮಯವನ್ನು ರದ್ದು ಮಾಡಿದ್ದು, ಹೊಸ ದಿನಾಂಕವನ್ನು ಘೋಷಣೆ ಮಾಡುವುದಾಗಿ ನಾಸಾ ಹೇಳಿದೆ.
ಆ್ಯಕ್ಸಿಯಂ-4 ವಾಣಿಜ್ಯ ಕಾರ್ಯಾಚರಣೆಯನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಿದ್ದಾರೆ. ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾಮ್ಸ್ಕಿ -ವಿಸ್ನಿವಿಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.