ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪುರಸ್ಕೃತರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು
ಕೃಪೆ: X / @rashtrapatibhvn
ನವದೆಹಲಿ: ಕರ್ನಾಟಕದ ಈಜುಪಟು ಧಿನಿಧಿ ದೇಸಿಂಗು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಶುಕ್ರವಾರ ಪ್ರದಾನ ಮಾಡಿದರು.
ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಿದರು.
ವೀರ ಬಾಲ ದಿನದ (ಡಿಸೆಂಬರ್ 26) ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಸ್ಕಾರ ಸ್ವೀಕರಿಸಿದ ಮಕ್ಕಳನ್ನು ಅಭಿನಂದಿಸಿದರು.
‘ವಿಜೇತ ಮಕ್ಕಳು ತಮ್ಮ ಕುಟುಂಬ, ಸಮುದಾಯ ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈ ಪ್ರಶಸ್ತಿಯು ದೇಶದ ಎಲ್ಲ ಮಕ್ಕಳಿಗೆ ಸ್ಫೂರ್ತಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಏಳು ವರ್ಷದ ವಾಕಾ ಲಕ್ಷ್ಮಿ ಪ್ರಗ್ನಿಕಾಳಂತಹ ಪ್ರತಿಭಾನ್ವಿತ ಮಕ್ಕಳಿಂದಾಗಿ ವಿಶ್ವದ ವೇದಿಕೆಗಳಲ್ಲಿ ಭಾರತವನ್ನು ‘ಚೆಸ್ ಪವರ್ಹೌಸ್’ ಎಂದು ಪರಿಗಣಿಸಲಾಗುತ್ತಿದೆ. ಅಜಯ್ ರಾಜ್ ಮತ್ತು ಮಹಮ್ಮದ್ ಸಿದಾನ್ ಪಿ. ತಮ್ಮ ಜಾಣ್ಮೆ ಮತ್ತು ಶೌರ್ಯದಿಂದ ಹಲವು ಜನರ ಜೀವವನ್ನು ಉಳಿಸಿದ್ದಾರೆ. ಇವರು ಎಲ್ಲ ಶ್ಲಾಘನೆಗೆ ಅರ್ಹರು’ ಎಂದು ಹೇಳಿದರು.
‘9 ವರ್ಷ ವ್ಯೋಮ ಪ್ರಿಯಾ ಮತ್ತು 11 ವರ್ಷ ಕಮ್ಲೇಶ್ ಕುಮಾರ್ ಜನರ ಜೀವವನ್ನು ಉಳಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 10 ವರ್ಷ ಶ್ರವಣ್ ಸಿಂಗ್ ಆಪರೇಷನ್ ಸಿಂಧೂರ ಸಂದರ್ಭದಲ್ಲಿನ ಅಪಾಯವನ್ನೂ ಲೆಕ್ಕಿಸದೆ ಮನೆಯ ಸಮೀಪ ನಿಯೋಜನೆಗೊಂಡಿದ್ದ ಭಾರತೀಯ ಸೈನಿಕರಿಗೆ ನಿತ್ಯ ನೀರು, ಹಾಲು ಮತ್ತು ಲಸ್ಸಿಯನ್ನು ನೀಡಿದ್ದಾರೆ. ಅಂಗವಿಕಲ ಬಾಲಕಿ ಶಿವಾನಿ ಹೊಸೂರು ಉಪ್ಪಾರ ಅವರು ತಮ್ಮ ದೈಹಿಕ ಮತ್ತು ಆರ್ಥಿಕ ಮಿತಿಯನ್ನೂ ಲೆಕ್ಕಿಸದೆ ವಿಶ್ವ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ವೈಭವ್ ಸೂರ್ಯವಂಶಿ ಕ್ರಿಕೆಟ್ನಲ್ಲಿ ಛಾಪು ಮೂಡಿಸಿ ಹಲವು ದಾಖಲೆ ಮಾಡಿದ್ದಾರೆ’ ಎಂದು ಹೇಳಿದರು.
'ವೀರ ಬಾಲ ದಿವಸ'ದ ಹಿನ್ನೆಲೆ ಏನು?
10ನೇ ಸಿಖ್ ಧರ್ಮಗುರು ಗುರು ಗೋವಿಂದ ಸಿಂಗ್ ಅವರು ಮೊಘಲರ ಆಳ್ವಿಕೆ ವೇಳೆ ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ 1699ರಲ್ಲಿ ಖಾಲ್ಸಾ ಪಂಥ ಸ್ಥಾಪಿಸಿದ್ದರು.
ಖಾಲ್ಸಾದಲ್ಲಿ ಭಾಗವಹಿಸಿದ್ದ, ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳನ್ನು ಮೊಘಲ್ ಸಾಮ್ರಾಟರು ಗಲ್ಲಿಗೇರಿಸಿದ್ದರು. ಆ ಮಕ್ಕಳ ಸ್ಮರಣಾರ್ಥವಾಗಿ ಡಿಸೆಂಬರ್ 26ರಂದು 'ವೀರ ಬಾಲ ದಿವಸ' ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿ 9ರಂದು ಘೋಷಿಸಿದ್ದರು.
ಪುರಸ್ಕೃತರು
ಶೌರ್ಯ
ವ್ಯೋಮ ಪ್ರಿಯಾ (ಮರಣೋತ್ತರ) – ತಮಿಳುನಾಡು
ಕಮಲೇಶ್ ಕುಮಾರ್ (ಮರಣೋತ್ತರ) – ಬಿಹಾರ
ಮೊಹಮ್ಮದ್ ಸಿದಾನ್ (11 ವರ್ಷ) – ಕೇರಳ
ಅಜಯ್ ರಾಯ್ (9 ವರ್ಷ) – ಉತ್ತರ ಪ್ರದೇಶ
ಕಲೆ & ಸಂಸ್ಕೃತಿ
ಏಸ್ತೇರ್ ಲಾಲ್ದುಹಾಮಿ ಹನಾಮ್ತೆ (9 ವರ್ಷ) – ಮಿಜೋರಾಂ
ಸುಮನ್ ಸರ್ಕಾರ್ (16 ವರ್ಷ) – ಪಶ್ಚಿಮ ಬಂಗಾಳ
ಪರಿಸರ
ಪೂಜಾ (17 ವರ್ಷ) – ಉತ್ತರ ಪ್ರದೇಶ
ಸಮಾಜ ಸೇವೆ
ಶ್ರವಣ್ ಸಿಂಗ್ (10 ವರ್ಷ) – ಪಂಜಾಬ್
ವನ್ಶ್ ತಯಾಲ್ (17 ವರ್ಷ) – ಚಂಡೀಗಢ
ವಿಜ್ಞಾನ & ತಂತ್ರಜ್ಞಾನ
ಆಯಿಷಿ ಪ್ರಿಶಾ ಬೋರಾ (14 ವರ್ಷ) – ಅಸ್ಸಾಂ
ಆರ್ನವ್ ಅನುಪ್ರಿಯ ಮಹರ್ಷಿ (17 ವರ್ಷ) – ಮಹಾರಾಷ್ಟ್ರ
ಕ್ರೀಡಾ ವಿಭಾಗ
ಜ್ಯೋತಿ, ಪ್ಯಾರಾ ಅಥ್ಲೀಟ್ (17 ವರ್ಷ) – ಹರಿಯಾಣ
ಶಿವಾನಿ ಉಪ್ಪಾರ, ಪ್ಯಾರಾ ಅಥ್ಲೀಟ್ (17 ವರ್ಷ) – ಆಂಧ್ರ ಪ್ರದೇಶ
ಧಿನಿಧಿ ದೇಶಿಂಘು, ಈಜು (15 ವರ್ಷ) – ಕರ್ನಾಟಕ
ಅನುಷ್ಕಾ ಕುಮಾರಿ, ಫುಟ್ಬಾಲ್ (14 ವರ್ಷ) – ಜಾರ್ಖಂಡ್
ಯೋಗಿತಾ ಮಾಂಡವಿ, ಜೂಡೋ (14 ವರ್ಷ) – ಚತ್ತೀಸಗಢ
ಜೋಶ್ನಾ ಸಾಬರ್, ವೇಯ್ಟ್ಲಿಫ್ಟರ್ (16 ವರ್ಷ) – ಒಡಿಶಾ
ವಿ.ಎಲ್. ಪ್ರಗ್ನಿಕಾ, ಚೆಸ್ (7 ವರ್ಷ) – ಗುಜರಾತ್
ವಿಶ್ವನಾಥ್ ಪದಕಂತಿ, ಪರ್ವತಾರೋಹಿ (16 ವರ್ಷ) – ತೆಲಂಗಾಣ
ವೈಭವ್ ಸೂರ್ಯವಂಶ, ಕ್ರಿಕೆಟ್ (14 ವರ್ಷ) – ಬಿಹಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.