ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (ಎನ್ಎಚ್ಆರ್ಸಿ) ಅಧ್ಯಕ್ಷರು ರಚಿಸಿದ್ದ ಸಮಿತಿಯು ಕಲ್ಕತ್ತ ಹೈಕೋರ್ಟ್ಗೆ ಬುಧವಾರ ವರದಿ ಸಲ್ಲಿಸಿದೆ.
ಈ ಪ್ರಕರಣ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(ಪಿಐಎಲ್) ಕೈಗೆತ್ತಿಕೊಂಡಿರುವ ಐದು ಸದಸ್ಯರ ಪೀಠವು,‘ಎನ್ಎಚ್ಆರ್ಸಿಯ ಸಮಿತಿಯು ಈ ಪ್ರಕರಣಗಳನ್ನು ಪರಿಶೀಲಿಸಲಿದೆ. ಈಗಾಗಲೇ ಎನ್ಎಚ್ಆರ್ಸಿ ದೂರಗಳನ್ನು ಸ್ವೀಕರಿಸಿದೆ ಎಂದು ಹೇಳಿತ್ತು. ಅಲ್ಲದೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಎನ್ಎಚ್ಆರ್ಸಿಯ ಸಮಿತಿಯು ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಬುಧವಾರ ನ್ಯಾಯಾಲಕ್ಕೆ ಸಲ್ಲಿಸಿದೆ.
ಈ ಐದು ಸದಸ್ಯರ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿಗಳಾದ ಐ.ಪಿ ಮುಖರ್ಜಿ, ಹರೀಶ್ ಟಂಡನ್, ಸೌಮೆನ್ ಸೇನ್ ಮತ್ತು ಸುಭತ್ರ ತಾಲ್ಕೂದಾರ್ ಇದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಲು ಸಮಿತಿ ರೂಪಿಸುವಂತೆ ಹೈಕೋರ್ಟ್ ಎನ್ಎಚ್ಆರ್ಸಿಗೆ ಜೂನ್ 18ರಂದು ನಿರ್ದೇಶನ ನೀಡಿತ್ತು. ಈ ಆದೇಶದಂತೆ ರಾಜೀವ್ ಜೈನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.