ಮುಂಬೈ: 26/11 ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ಸಂಬಂಧ ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್ಐಎ) ಮುಂಬೈ ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶುಕ್ರವಾರ ತಿಳಿಸಿದ್ದಾರೆ.
ಸಂಚುಕೋರ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಿದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.
ರಾಣಾನನ್ನು ಎನ್ಐಎ ನವದೆಹಲಿಯಿಂದ ಮುಂಬೈಗೆ ಕರೆ ತರಲಿದೆಯೇ ಎಂದು ಕೇಳಿದಾಗ, ‘ಅದು ಕೇಂದ್ರ ತನಿಖಾ ಏಜೆನ್ಸಿಯ ತೀರ್ಮಾನ. ರಾಣಾನನ್ನು ಎಲ್ಲಿಗೆ ಕರೆದೊಯ್ಯಬೇಕು ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಎನ್ಐಎ ನಿರ್ಧರಿಸಲಿವೆ’ ಎಂದು ಫಡಣವೀಸ್ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಈ ಪ್ರಕರಣದ ತನಿಖೆಯಲ್ಲಿ ಎನ್ಐಎಗೆ ಅಗತ್ಯವಿರುವ ಯಾವುದೇ ಮಾಹಿತಿ ಮತ್ತು ನೆರವನ್ನು ಮಹಾರಾಷ್ಟ್ರ ಸರ್ಕಾರ ನೀಡಲಿದೆ. ತನಿಖೆಯ ಬಗ್ಗೆ ನಮಗೆ ಯಾವುದೇ ಮಾಹಿತಿಯ ಅಗತ್ಯವಿದ್ದರೆ, ಕೇಂದ್ರದ ಏಜೆನ್ಸಿ ಜತೆಗೆ ನಮ್ಮ ಪೊಲೀಸರು ಸಮನ್ವಯ ಸಾಧಿಸಲಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.