ADVERTISEMENT

ಬಿಜೆಪಿಗೆ ಇನ್ನು ಅಚ್ಛೇ ದಿನ್ ಬರುವುದಿಲ್ಲ: ಮಮತಾ ಬ್ಯಾನರ್ಜಿ 

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 18:33 IST
Last Updated 19 ಜನವರಿ 2019, 18:33 IST
ಕೋಲ್ಕತ್ತದಲ್ಲಿ ಶನಿವಾರ ನಡೆದ ‘ಭಾರತ ಏಕತಾ ರ‍್ಯಾಲಿ’ಯಲ್ಲಿ ಮುಖಂಡರಾದ ಜಯಂತ್‌ ಚೌಧರಿ, ಎಚ್‌. ಡಿ.ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ಫಾರೂಕ್‌ ಅಬ್ದುಲ್ಲಾ, ಎಚ್‌. ಡಿ. ದೇವೇಗೌಡ, ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ, ಶರದ್‌ ಪವಾರ್‌, ಅರವಿಂದ ಕೇಜ್ರಿವಾಲ್‌ ಹಾಗೂ ಶರದ್‌ ಯಾದವ್‌ ಭಾಗವಹಿಸಿದ್ದರು    –ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ಶನಿವಾರ ನಡೆದ ‘ಭಾರತ ಏಕತಾ ರ‍್ಯಾಲಿ’ಯಲ್ಲಿ ಮುಖಂಡರಾದ ಜಯಂತ್‌ ಚೌಧರಿ, ಎಚ್‌. ಡಿ.ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ಫಾರೂಕ್‌ ಅಬ್ದುಲ್ಲಾ, ಎಚ್‌. ಡಿ. ದೇವೇಗೌಡ, ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ, ಶರದ್‌ ಪವಾರ್‌, ಅರವಿಂದ ಕೇಜ್ರಿವಾಲ್‌ ಹಾಗೂ ಶರದ್‌ ಯಾದವ್‌ ಭಾಗವಹಿಸಿದ್ದರು –ಪಿಟಿಐ ಚಿತ್ರ   

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅಂತ್ಯಕಾಲ ಸಮೀಪಿಸಿದ್ದು, ಬಿಜೆಪಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಬುಧವಾರ ಆಯೋಜಿಸಿದ್ದ ‘ಭಾರತ ಏಕತಾ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮೋದಿ ಅವರಿಗೆ ಇನ್ನು ‘ಅಚ್ಚೇ ದಿನ್‌’ ಬರುವುದಿಲ್ಲ. ಜನರು ಈಗಾಗಲೇ ಅದನ್ನು ನಿರ್ಧರಿಸಿಯಾಗಿದೆ ಎಂದರು.

‘ರಥಯಾತ್ರೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ. ಅದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಅಬ್ಬರಿಸಿದರು.

ADVERTISEMENT

‘ಒಂದು ವೇಳೆ ನೀವು ಏನಾದರೂ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಬ್ಯಾಂಕ್‌ನಲ್ಲಿಟ್ಟಿರುವ ನಿಮ್ಮ ಹಣ ಕೂಡ ಮರಳಿ ಕೈ ಸೇರುವುದು ಅನುಮಾನ’ ಎಂದರು.

‘ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರವನ್ನು ಬದಲಿಸುತ್ತೇವೆ. ಚುನಾವಣೆ ಬಳಿಕ ನಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುತ್ತೇವೆ’ ಎಂದು ಘೋಷಿಸಿದರು.

ಎಲ್ಲವನ್ನೂ ಬದಲಾಯಿಸುವ ಸಮಯ

ದೇಶದ ಜನರನ್ನು ವಿಭಜನೆ ಮಾಡಲು ಕಳೆದ 70 ವರ್ಷದಿಂದ ಪಾಕಿಸ್ತಾನಕ್ಕೆ ಸಾಧ್ಯವಾಗದೇ ಇದ್ದದ್ದನ್ನು ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದೆ. ಈ ಸರ್ಕಾರ ಎಲ್ಲವನ್ನೂ ಬದಲಿಸಲು ಯತ್ನಿಸುತ್ತಿದೆ, ಕಾನೂನು, ಸಂವಿಧಾನ ಹೀಗೆ ಎಲ್ಲವನ್ನೂ. ಹಾಗಾಗಿ ಈಗ ಸರ್ಕಾರವನ್ನೂ ಬದಲಿಸುವ ಸಮಯ ಬಂದಿದೆ.

ರೈತರ ಬಳಿ ಹಣವಿಲ್ಲ, ಉದ್ಯೋಗವಕಾಶವಿಲ್ಲದೇ ಇರುವಾಗ ಮೀಸಲಾತಿ ನೀಡುವುದರ ಪ್ರಯೋಜನವೇನು? ಈ ದೇಶದ ಒಳಿತಿಗಾಗಿ ನಾವು ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕಿದೆ. ನಮ್ಮಲ್ಲಿ ನಾಯಕರು ಯಾರೂ ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರ ಕಡೆಒಬ್ಬ ಪ್ರಧಾನಿ ಮತ್ತು ಒಬ್ಬರು ಪಕ್ಷದ ಅಧ್ಯಕ್ಷರಿದ್ದಾರೆ. ಆದರೆ ನಮ್ಮಲ್ಲಿ ಹಲವಾರು ನಾಯಕರಿದ್ದಾರೆ.ನಮ್ಮ ಘಟಬಂಧನದಲ್ಲಿ ಎಲ್ಲರ ನಾಯಕರು ಇದ್ದಾರೆ. ನಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಈಗ ಚರ್ಚೆ ಮಾಡುವ ಅಗತ್ಯವಿಲ್ಲ.

ಅವರು ಸಿಬಿಐ, ಜಾರಿ ನಿರ್ದೇಶನಾಲಯ, ಆರ್‌ಬಿಐಯನ್ನು ತೇಜೋವಧೆ ಮಾಡಿದ್ದಾರೆ.ಅವರು ಬ್ಯಾಂಕ್‍ಗಳನ್ನು ಶಕ್ತಿಗುಂದಿಸಿದರು.ಈ ಬಾರಿಯೂ ನೀವು ಬಿಜೆಪಿಗೆ ಮತ ನೀಡಿದರೆ ನೀವು ಬ್ಯಾಂಕ್‍ನಲ್ಲಿರಿಸಿರುವ ಹಣವೂ ನಿಮಗೆ ವಾಪಸ್ ಸಿಗಲಾರದು.

ನಾವು ಜಗನ್ನಾಥ ರಥ ಯಾತ್ರೆಯಲ್ಲಿ ನಂಬಿಕೆ ಇರಿಸಿದ್ದೇವೆ. ನಿಮ್ಮ ರಥ ಯಾವುದು? ಬಂಗಾಳದಲ್ಲಿ ಹಿಂಸಾಚಾರ ನಡೆಯಲು ನಾವು ಬಿಡುವುದಿಲ್ಲ. ರಥಯಾತ್ರೆಯ ಹೆಸರಲ್ಲಿ ಹಿಂಸಾಚಾರ ನಡೆಯಲು ನಾವು ಬಿಡುವುದಿಲ್ಲ ಎಂದಿದ್ದಾರೆ ಮಮತಾ ಬ್ಯಾನರ್ಜಿ.

ಮೋದಿಯವರು ಎಲ್ಲರನ್ನೂ ಜತೆಯಾಗಿ ಕರೆದೊಯ್ಯಲು ವಿಫಲವಾಗಿದ್ದಾರೆ.ಎಲ್ಲರನ್ನೂಜತೆಯಾಗಿ ಕರೆದೊಯ್ಯಲು ಸಾಧ್ಯವಾಗದ ವ್ಯಕ್ತಿ ನಾಯಕ ಆಗಲಾರ.ಇದು ಬಿಜೆಪಿಯ ಅಂತ್ಯದ ಆರಂಭವಾಗಿದೆ.ಇಂಥಾ ಫ್ಯಾಸಿಸ್ಟ್ ರೀತಿಯಿಂದ ದೇದಲ್ಲಿಆಡಳಿತ ನಡೆಸುವುದನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದ ಮಮತಾ, ಬಿಜೆಪಿ ಹಠಾವೋ, ದೇಶ್ ಬಚಾವೋ, ಜೈ ಹಿಂದ್, ವಂದೇ ಮಾತರಂ ಎಂದು ಹೇಳಿ ತಮ್ಮ ಭಾಷಣ ಮುಗಿಸಿದ್ದಾರೆ.

ಸೋನಿಯಾ, ರಾಹುಲ್‌ ಗೈರು!

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ ಗೈರು ಹಾಜರು ಎದ್ದು ಕಾಣುತಿತ್ತು. ಈ ನಾಯಕರು ತಮ್ಮ ಪ್ರತಿನಿಧಿಗಳನ್ನು ರ‍್ಯಾಲಿಗೆ ಕಳಿಸಿದ್ದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.