ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ
ನವದೆಹಲಿ: ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತುರ್ತು ಪರಿಸ್ಥಿತಿ ಎದುರಾದಾಗ ದೇಶದ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಇಡೀ ದೇಶವು ಸಶಸ್ತ್ರ ಪಡೆಗಳ ಜೊತೆ ನಿಂತಿರುತ್ತದೆ’ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಸಲುವಾಗಿ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದ ಎಎಪಿ ನಾಯಕರು, ‘ಕದನ ವಿರಾಮ ಫೋಷಣೆಗೆ ಕಾರಣವೇನು?, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಿಜವಾಗಿಯೂ ನ್ಯಾಯ ದೊರಕಿದೆಯೇ’ ಎಂದು ಟೀಕಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರೇಖಾ ಗುಪ್ತಾ, ‘ಹವಾನಿಯಂತ್ರಿತ (ಎಸಿ) ಕೋಣೆಗಳಲ್ಲಿ ಕುಳಿತು ಟಿವಿ ನೋಡುವ ಮೂಲಕ ಯಾರು ಏನು ಬೇಕಾದರೂ ಹೇಳಬಹುದು. ಕಠಿಣ ಸಂದರ್ಭವನ್ನು ಎದುರಿಸುತ್ತಿರುವವರು ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಒಬ್ಬ ತಂದೆ ತನ್ನ ದೇಶ, ತನ್ನ ಕುಟುಂಬ, 140 ಕೋಟಿ ಭಾರತೀಯರ ಬಗ್ಗೆ ಯೋಚಿಸಬೇಕು. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ’ ಎಂದು ಗುಪ್ತಾ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.