ಹೋಳಿ ಹಬ್ಬದಲ್ಲಿ ಯೋಗಿ ಆದಿತ್ಯನಾಥ್ ಭಾಗಿ
(ಚಿತ್ರ ಕೃಪೆ: X/@myogiadityanath)
ಗೋರಖಪುರ: 'ಸನಾತನ ಧರ್ಮದಂತಹ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಯಾವುದೇ ದೇಶ ಹಾಗೂ ಧರ್ಮದಲ್ಲಿ ಇಲ್ಲ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶುಕ್ರವಾರ) ಹೋಳಿ ಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.
ಗೋರಖಪುರದಲ್ಲಿ ಸಾಂಪ್ರದಾಯಿಕ 'ನರಸಿಂಹ ಶೋಭಾಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಹೋಳಿ ಹಬ್ಬವು ಏಕತೆಯ ಮೂಲಕ 'ಅಖಂಡ' ರಾಷ್ಟ್ರವನ್ನು ಉಳಿಸಿಕೊಳ್ಳುವ ಸಂದೇಶವನ್ನು ಸಾರುತ್ತದೆ. 'ಏಕ ಭಾರತ', 'ಶ್ರೇಷ್ಠ ಭಾರತ'ದ ದೂರದೃಷ್ಟಿಯನ್ನು ಈಡೇರಿಸುತ್ತದೆ' ಎಂದು ಹೇಳಿದ್ದಾರೆ.
'ಸನಾತನ ಧರ್ಮದಲ್ಲಿರುವಂತಹ ಶ್ರೀಮಂತ ಹಬ್ಬಗಳ ಪರಂಪರೆ ಜಗತ್ತಿನ ಬೇರೆ ಯಾವುದೇ ದೇಶ, ಜಾತಿ ಅಥವಾ ಧರ್ಮದಲ್ಲಿಲ್ಲ. ನಮಗೆ ಸನಾತನ ಧರ್ಮದಲ್ಲಿ ನಂಬಿಕೆಯಿದೆ. ಆ ನಂಬಿಕೆಯೇ ಹಬ್ಬಗಳ ಆತ್ಮ. ಭಾರತ ಹಬ್ಬಗಳ ಮೂಲಕ ಮುನ್ನಡೆಯುತ್ತದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಸನಾತನ ಧರ್ಮವನ್ನು ವಿರೋಧಿಸುವವರು ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸನಾತನ ಧರ್ಮ ಹಾಗೂ ಭಾರತದ ಸಾಮರ್ಥ್ಯವನ್ನು ಕಂಡಿದ್ದಾರೆ. ಸಂಗಮದಲ್ಲಿ ನಡೆದ ಬೃಹತ್ ಸ್ನಾನದ ಆಚರಣೆಯಲ್ಲಿ 66 ಕೋಟಿಗೂ ಅಧಿಕ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲಿ ಜಾತಿ ಅಥವಾ ಧರ್ಮದ ಆಧಾರದಲ್ಲಿ ಯಾವುದೇ ಬೇಧಭಾವ ಇರಲಿಲ್ಲ' ಎಂದು ಅವರು ಹೇಳಿದ್ದಾರೆ.
ದೇಶವನ್ನು ವಿಭಜಿಸಲು ಯಾರು ಬಯಸುತ್ತಿದ್ದಾರೆ?’ ಎಂದು ಪ್ರಶ್ನಿಸಿದ ಯೋಗಿ, ‘ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದವರು, ಗೋ ಕಳ್ಳ ಸಾಗಾಣೆಯಲ್ಲಿ ಭಾಗಿಯಾಗಿರುವವರು ಮತ್ತು ಗೋ ಹತ್ಯೆಗೆ ಪ್ರೋತ್ಸಾಹ ನೀಡುತ್ತಿರುವವರು ಮತ್ತು ಅಂಥಹವರನ್ನು ಅಧಿಕಾರಕ್ಕಾಗಿ ತನ್ನ ಪಾಲುದಾರರನ್ನಾಗಿ ಮಾಡಿಕೊಂಡಿರುವವರು ಈ ನಿಟ್ಟಿನಲ್ಲಿ ಯತ್ನಿಸುತ್ತಿದ್ದಾರೆ’ ಎಂದು ಯೋಗಿ ದೂರಿದರು. ಇವರು ಭಾರತ ವಿಕಾಸ ಬಯಸುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.