ಇರಾನ್ನಿಂದ ಭಾರತೀಯರು ವಾಪಾಸ್
(ಚಿತ್ರ ಕೃಪೆ:X/@MEAIndia)
ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಣ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ತೀವ್ರಗೊಂಡಿದೆ. ಸಂಘರ್ಷ ಪೀಡಿತ ಇರಾನ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು 'ಆಪರೇಷನ್ ಸಿಂಧು' ಘೋಷಿಸಿದ್ದ ಕೇಂದ್ರ ಸರ್ಕಾರವು ಈಗ ಇದಕ್ಕೆ ಸಮಾನವಾಗಿ ಇಸ್ರೇಲ್ನಿಂದಲೂ ಭಾರತೀಯ ಪ್ರಜೆಗಳನ್ನು ಕರೆತರಲು ಕ್ರಮ ಕೈಗೊಂಡಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಣ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ನಿಂದ ಹೊರ ಬರಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇಸ್ರೇಲ್ನಿಂದ ಭಾರತಕ್ಕೆ ಅವರ ಪ್ರಯಾಣವನ್ನು ಭೂಗಡಿಯ ನಂತರ ವಿಮಾನದ ಮೂಲಕ ಸುಗಮಗೊಳಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಟೆಲ್ ಅವೀವ್ನಲ್ಲಿರುವ ಭಾರತೀಯ ಕಚೇರಿಯು ಪ್ರಜೆಗಳ ಸ್ಥಳಾಂತರಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಿದೆ. ಅಲ್ಲದೆ ಈಗಾಗಲೇ ಹೆಸರು ನೋಂದಾಯಿಸದ ಪ್ರಜೆಗಳು ಈ ಕೆಳಗಿನ ಲಿಂಕ್ಗೆ ಭೇಟಿ ಕೊಟ್ಟು ಹೆಸರು ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಲಿಂಕ್ ಇಲ್ಲಿದೆ: (https://www.indembassyisrael.gov.in/indian_national_reg)
ಯಾವುದೇ ಸಂದೇಹಗಳಿದ್ದರೆ 24/7 ಗಂಟೆ ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ದೂರವಾಣಿ ಸಂಖ್ಯೆಗಳು: +972 54-7520711; +972 54-3278392;
ಇಮೇಲ್: cons1.telaviv@mea.gov.in.
ಇಸ್ರೇಲ್ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿರುವಂತೆಯೂ ಸೂಚನೆ ನೀಡಲಾಗಿದ್ದು, ಅಲ್ಲಿನ ಸರ್ಕಾರ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ತಿಳಿಸಲಾಗಿದೆ.
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಗೆ ಭಾರತ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತದೆ. ಈಗಿನ ಪರಿಸ್ಥಿತಿಯ ಮೇಲೆ ಸರ್ಕಾರವು ಸೂಕ್ಷ್ಮ ನಿಗಾ ವಹಿಸುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.