ಮಸೂದ್ ಅಜರ್
ಪಿಟಿಐ ಚಿತ್ರ
ಲಾಹೋರ್: ಪಾಕಿಸ್ತಾನದ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಕುಟುಂಬದ 10 ಮಂದಿ ಹಾಗೂ ನಾಲ್ವರು ಆಪ್ತರು ಮೃತಪಟ್ದಿದ್ದಾರೆ.
ಪಾಕ್ನ ಬಹಾವಲ್ಪುರದಲ್ಲಿ ಉಗ್ರ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಮಸೂಧ್ ಕುಟುಂಬದ ಒಟ್ಟು 14 ಮಂದಿ ಮೃತಪಟ್ಟಿರುವುದಾಗಿ ಪಿಟಿಐ ವರದಿ ತಿಳಿಸಿದೆ.
ಬಹಾವಲ್ಪುರದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ವಿಸ್ತೃತ ಕುಟುಂಬದ ಐದು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಇದರ ಜತೆಗೆ ಅಜರ್ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿದೆ.
ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮಾ ಉಗ್ರ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ನಲ್ಲಿರುವ ಜೈಷ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. 2019 ಮೇ 1ರಂದು ವಿಶ್ವಸಂಸ್ಥೆ ಅಜರ್ನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು.
1994ರಲ್ಲಿ ಕಾಶ್ಮೀರದ ಅನಂತನಾಗ್ನಲ್ಲಿ ಅಜರ್ನ್ನು ಬಂಧಿಸಲಾಗಿತ್ತು. ಆದರೆ 1999 ಡಿಸೆಂಬರ್ನಲ್ಲಿ ಭಾರತದ ವಿಮಾನ IC814ನ್ನು ಅಪಹರಿಸಿದಾಗ ಅಜರ್ನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆಯೊಡ್ಡಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿದ್ದ ಅಪಹರಣಕಾರರ ಒತ್ತಾಯಕ್ಕೆ ಮಣಿದು ಸರ್ಕಾರ ಅಜರ್ನ್ನು ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.