ADVERTISEMENT

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

ಪಿಟಿಐ
Published 8 ಡಿಸೆಂಬರ್ 2025, 17:10 IST
Last Updated 8 ಡಿಸೆಂಬರ್ 2025, 17:10 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು. ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷವು ಗೀತೆಯನ್ನು ಕೇವಲ ಎರಡು ಚರಣಗಳಿಗೆ ಇಳಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯ ಕಾರಣಕ್ಕೆ ಆಡಳಿತಾರೂಢ ಎನ್‌ಡಿಎ ರಾಷ್ಟ್ರಗೀತೆಯ ಕುರಿತು ಚರ್ಚೆ ನಡೆಸುತ್ತಿದೆ ಎಂದು ಕಾಂಗ್ರೆಸ್‌ ತಿರುಗೇಟು ನೀಡಿತು. ಸುಮಾರು 10 ತಾಸು ನಡೆದ ಚರ್ಚೆಯು ಸದನ ಹಾಗೂ ಸದನದ ಹೊರಗೆ ಎನ್‌ಡಿಎ–ಇಂಡಿಯಾ ಮೈತ್ರಿಕೂಟದ ನಡುವೆ ‘ಕದನ’ಕ್ಕೂ ಕಾರಣವಾಯಿತು. ಚರ್ಚೆ ಆರಂಭಕ್ಕೆ ಮೊದಲು ಮೋದಿ ಲೋಕಸಭೆಗೆ ಪ್ರವೇಶಿಸಿದಾಗ ಬಿಜೆಪಿ ಸಂಸದರು, ‘ನಾವು ಬಿಹಾರ ಗೆದ್ದಿದ್ದೇವೆ. ಈಗ ಪಶ್ಚಿಮ ಬಂಗಾಳದ ಸರದಿ’ ಎಂಬ ಘೋಷಣೆಗಳನ್ನು ಕೂಗಿ ರಾಜಕೀಯ ಚರ್ಚೆಗೆ ಮುನ್ನುಡಿ ಹಾಕಿಕೊಟ್ಟರು.

ಮುಸ್ಲಿಂ ಲೀಗ್‌ ಓಲೈಕೆಗೆ ಹಾಡಿಗೆ ಕತ್ತರಿ ಹಾಕಿಸಿದ್ದ ನೆಹರೂ: ಮೋದಿ

‘ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್‌ ಪಕ್ಷವು ವಂದೇ ಮಾತರಂ ಗೀತೆಯನ್ನು ತುಂಡು ತುಂಡಾಗಿ ಒಡೆದು ಹಾಕಿದೆ. ಜತೆಗೆ, ಈಗಲೂ ಓಲೈಕೆಯ ರಾಜಕಾರಣದಲ್ಲಿ ತೊಡಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ADVERTISEMENT

ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಹಾಗೂ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಸ್ಲಿಮರನ್ನು ಸಮಾಧಾನಪಡಿಸಲು ರಾಷ್ಟ್ರ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಮೊಟಕುಗೊಳಿಸಲಾಗಿದೆ ಎಂದು ಅವರು ದೂರಿದರು.

‘ವಂದೇ ಮಾತರಂ ಗೀತೆಯನ್ನು ವಿರೋಧಿಸಿ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ ಲಖನೌದಲ್ಲಿ 1937ರಲ್ಲಿ ಪ್ರತಿಭಟನೆ ನಡೆಸಿತ್ತು. ಆದರೆ, ನೆಹರೂ ಹಾಗೂ ಕಾಂಗ್ರೆಸ್‌ ಅದನ್ನು ವಿರೋಧಿಸುವ ಬದಲು, ಗೀತೆಯನ್ನು ಪರಿಶೀಲಿಸಲು ಮುಂದಾಗಿದ್ದರು’ ಎಂದರು.

ಆ ನಂತರ ನೆಹರೂ ಅವರು ಸುಭಾಷ್ ಚಂದ್ರ ಬೋಸ್‌ಗೆ ಪತ್ರ ಬರೆದು ಹಾಡಿನ ಹಿನ್ನೆಲೆ ಮುಸ್ಲಿಮರಲ್ಲಿ ದ್ವೇಷ ಬಿತ್ತಬಹುದು ಎಂದು ಹೇಳಿದ್ದರು. ನಂತರ ಪಕ್ಷವು ಬಂಕಿಮ್ ಚಂದ್ರ ಚಟರ್ಜಿಯವರ ಬಂಗಾಳದಲ್ಲಿ ಅಧಿವೇಶನ ಕರೆದಿತ್ತು. ಈ ನಡೆ ವಿರುದ್ಧ ದೇಶದಾದ್ಯಂತ ಜನರು ಪ್ರತಿಭಟಿಸಿದ್ದರು. ಆದರೆ, ಜಾತ್ಯತೀತತೆ ಮತ್ತು ಕೋಮು ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್ ವಂದೇ ಮಾತರಂ ವಿಷಯದಲ್ಲಿ ರಾಜಿ ಮಾಡಿಕೊಂಡಿತ್ತು. ಮುಸ್ಲಿಂ ಲೀಗ್‌ ಮುಂದೆ ಈ ರೀತಿ ಮಂಡಿಯೂರಿದ್ದು ದೇಶ ವಿಭಜನೆಗೂ ಕಾರಣವಾಯಿತು’ ಎಂದು ಅವರು ಆರೋಪಿಸಿದರು.

‘ಈ ಗೀತೆ ಎಷ್ಟು ಜನಪ್ರಿಯವಾಗಿದೆಯೆಂದರೆ ರಾಷ್ಟ್ರ ಗೀತೆಯಾಗಿ ಹೊರಹೊಮ್ಮಿದೆ ಎಂದು ಮಹಾತ್ಮಾ ಗಾಂಧೀಜಿ 1905ರಲ್ಲಿ ಪತ್ರ ಬರೆದಿದ್ದರು. ಜನಪ್ರಿಯ ಗೀತೆಗೆ ಅನ್ಯಾಯ ಸಂಭವಿಸಿದ್ದು ಏಕೆ. ಕಳೆದ ಶತಮಾನದಲ್ಲಿ ಅದಕ್ಕೆ ಏಕೆ ದ್ರೋಹ ಮಾಡಲಾಯಿತು. ಹಾಡಿನ ಕುರಿತ ಮಹಾತ್ಮ ಗಾಂಧಿಯವರ ಆಶಯಗಳನ್ನು ತಳ್ಳಿಹಾಕುವಷ್ಟು ಬಲಶಾಲಿಯಾಗಿದ್ದ ಆ ಶಕ್ತಿಗಳು ಯಾವುವು’ ಎಂದು ಅವರು ಪ್ರಶ್ನಿಸಿದರು.

‘ಗೀತೆಗೆ 50 ವರ್ಷ ತುಂಬಿದಾಗ ದೇಶವು ವಸಾಹತುಶಾಹಿಯ ಅಡಿಯಲ್ಲಿ ತತ್ತರಿಸುತ್ತಿತ್ತು. 100 ವರ್ಷವಾದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಆಗ ಸಂವಿಧಾನದ ಕತ್ತು ಹಿಸುಕಲಾಗಿತ್ತು. ದೇಶಭಕ್ತಿ ಹೊಂದಿದ್ದ, ರಾಷ್ಟ್ರಕ್ಕಾಗಿ ಪ್ರಾಣ ಸಮರ್ಪಿಸಲು ಸಿದ್ಧರಿದ್ದವರು ಜೈಲಿನಲ್ಲಿ ಬಂಧಿಗಳಾಗಿದ್ದರು’ ಎಂದು ಅವರು ಹೇಳಿದರು.

‘ತುರ್ತು ಪರಿಸ್ಥಿತಿಯು ನಮ್ಮ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿತ್ತು. ಈಗ ವಂದೇ ಮಾತರಂನ ಶ್ರೇಷ್ಠತೆಯನ್ನು ಪುನಃಸ್ಥಾಪಿಸಲು ನಮಗೆ ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಕಳೆದುಕೊಳ್ಳಲು ಬಿಡಬಾರದು’ ಎಂದು ಮೋದಿ ಸದನಕ್ಕೆ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಇಡೀ ದೇಶಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡಿತು ಎಂದು ಮೋದಿ ಹೇಳಿದರು.

ಬಂಗಾಳ ಚುನಾವಣೆ ಹೊತ್ತಲ್ಲಿ ಗೀತೆ ನೆನಪು: ಪ್ರಿಯಾಂಕಾ 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಜನರ ಸಮಸ್ಯೆಗಳಿಂದ ಬೇರೆಡೆಗೆ ಗಮನ ಸೆಳೆಯಲು ಸರ್ಕಾರವು ವಂದೇ ಮಾತರಂ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿದೆ ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದರು. 

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಅವರು ಈಗ ಹಿಂದಿನಂತಿಲ್ಲ. ಏಕೆಂದರೆ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ ಮತ್ತು ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ಪ್ರಧಾನಿ ದುರ್ಬಲ ಆಗುತ್ತಿರುವುದು ಸ್ಪಷ್ಟವಾಗಿ ಗೋಚರ ಆಗುತ್ತಿದೆ. ಆದ್ದರಿಂದ ಅವರು ಹಿಂದಿನ ವಿಷಯಗಳ ಬಗ್ಗೆ ಮಾತನಾಡದೆ ಬೇರೆ ಏನು ಮಾಡಲು ಸಾಧ್ಯ? ಪಕ್ಷದಲ್ಲಿರುವವರು (ಬಿಜೆಪಿ) ಮೌನವಾಗಿದ್ದಾರೆ. ಏಕೆಂದರೆ, ಅವರು ಸಹ ನಾಚಿಕೆಪಡುತ್ತಾರೆ. ದೇಶದ ಜನರು ಇಂದು ಅತೃಪ್ತರು, ದುಃಖಿತರಾಗಿದ್ದಾರೆ ಮತ್ತು ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ನೀವು ಅವುಗಳನ್ನು ಪರಿಹರಿಸುತ್ತಿಲ್ಲ‘ ಎಂದರು. 

ನರೇಂದ್ರ ಮೋದಿ ಅವರು ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಕಾಂಗ್ರೆಸ್‌ ಹಾಗೂ ನೆಹರೂ ಅವರನ್ನು ಉಲ್ಲೇಖಿಸುತ್ತಾರೆ. ಆಪರೇಷನ್ ಸಿಂಧೂರ ಕುರಿತ ಚರ್ಚೆ ಸಂದರ್ಭದಲ್ಲಿ ನೆಹರೂ ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ, ಸಂವಿಧಾನದ 75ನೇ ವಾರ್ಷಿಕೋತ್ಸವದ ಚರ್ಚೆ ವೇಳೆ ನೆಹರೂ ಹೆಸರು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಉಲ್ಲೇಖಿಸಿದ್ದರು. ಇಂತಹ ಹತ್ತಾರು ಉದಾಹರಣೆಗಳನ್ನು ಹೇಳಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ಪಂಡಿತ್ ನೆಹರೂ ಅವರ ಕೊಡುಗೆಗಳ ಕುರಿತು ಒಂದೂ ಕಪ್ಪು ಚುಕ್ಕೆ ಇಡಲು ನಿಮಗೆ ಸಾಧ್ಯವಾಗುವುದಿಲ್ಲ
ಗೌರವ್‌ ಗೊಗೊಯ್‌, ವಿರೋಧ ಪಕ್ಷದ ಉಪನಾಯಕ
‘ವಂದೇ ಮಾತರಂ’ ಮತ್ತು ಅದರ ಇತಿಹಾಸದ ಬಗ್ಗೆ ಪಕ್ಷಪಾತವಿಲ್ಲದೇ ಮೌಲ್ಯಮಾಪನ ಮಾಡುವ ಸಮಯ ಬಂದಿದೆ. ಎಲ್ಲರೂ ಹಾಡಿನ ಮೊದಲ ಎರಡು ಚರಣಗಳನ್ನು ಕೇಳಿದ್ದಾರೆ. ಆದರೆ ಹಲವರಿಗೆ ಉಳಿದವುಗಳ ಪರಿಚಯವಿಲ್ಲ. ಇಡೀ ಹಾಡು ಮತ್ತು ಆನಂದ್ ಮಠ ಪುಸ್ತಕವು ಎಂದಿಗೂ ಇಸ್ಲಾಂ ವಿರೋಧಿ ಯಾಗಿರಲಿಲ್ಲ. ಆದರೆ, ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯವು ಭಾರತದ ವಿಭಜನೆಗೆ ಕಾರಣವಾಯಿತು. ದೇಶದ ಸಂಸ್ಥೆಗಳನ್ನು ದುರ್ಬಲ ಗೊಳಿಸುವ ಪಿತೂರಿಯ ಭಾಗವಾಗಿ ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ವಿರೋಧ ಪಕ್ಷಗಳು ದಾಳಿ ನಡೆಸುತ್ತಿವೆ
ರಾಜನಾಥ್ ಸಿಂಗ್‌, ರಕ್ಷಣಾ ಸಚಿವ
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ ವಂದೇ ಮಾತರಂನ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂದು ವಿಭಜಕ ಶಕ್ತಿಗಳು ಈ ಹಾಡನ್ನು ಬಳಸಿಕೊಂಡು ವಿಭಜನೆಗೆ ಪ್ರಯತ್ನಿಸುತ್ತಿವೆ. ಈ ವ್ಯಕ್ತಿಗಳು ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಅನುಸರಿಸುತ್ತಿದ್ದಾರೆ.
ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ
ಬಿಜೆಪಿಯ ಏಕೈಕ ಉದ್ದೇಶ ಜನರನ್ನು ಮತ್ತಷ್ಟು ವಿಭಜಿಸುವುದು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅದನ್ನು ಮಾಡಲು ಬಯಸುತ್ತಿದ್ದಾರೆ. ಅವರಿಗೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ನಂಬಿಕೆ ಇದೆಯೇ ಮತ್ತು ಅವರು ಅದರಲ್ಲಿ ಭಾಗವಹಿಸಿದ್ದಾರೆಯೇ? 
ಪಿ.ಸಂತೋಷ್‌, ಸಿಪಿಐ ಸಂಸದ
ಸಾವರ್ಕರ್ ಜೈಲಿನಲ್ಲಿದ್ದಾಗ ಕ್ಷಮಾದಾನ ಅರ್ಜಿಗಳನ್ನು ಬರೆದರು. ತಾವು ಸ್ವಾತಂತ್ರ್ಯ ಪಡೆದುಕೊಂಡರು. ಆ ಸಮಯದಲ್ಲಿ, ಸೆಲ್ಯುಲಾರ್ ಜೈಲಿನಲ್ಲಿದ್ದ 585 ಕೈದಿಗಳಲ್ಲಿ 398 ಬಂಗಾಳಿಗಳು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಖುದಿರಾಮ್ ಬೋಸ್ ತಮ್ಮ ಪ್ರಾಣ ತ್ಯಾಗ ಮಾಡಿದಾಗ, ಇಂದಿನ ಆಡಳಿತ ಪಕ್ಷದ ಪೂರ್ವಜರು ಕ್ಷಮಾದಾನ ಅರ್ಜಿಗಳನ್ನು ಬರೆಯುವಲ್ಲಿ ನಿರತರಾಗಿದ್ದರು.
ಕಾಕೋಲಿ ಘೋಷ್‌ ದಸ್ತಿದಾರ್‌, ಟಿಎಂಸಿ ಸಂಸದೆ
ಪ್ರಧಾನಿ ಮೋದಿ ಮಾತುಗಳು ಕಳಪೆ ದರ್ಜೆಯದ್ದು. ವಾಸ್ತವವಾಗಿ, ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮಾತ್ರವಲ್ಲ, ಬಿಜೆಪಿಯ ನಾಯಕರು ಬಂಗಾಳದ ದ್ವೇಷಿಗಳು
ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.