ಹೈದರಬಾದ್ : ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಇದೇ ಏಪ್ರಿಲ್ 8ರಂದು ಹೈದರಾಬಾದ್ಗೆ ಭೇಟಿ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಸುಮಾರು ₹11,300 ಕೋಟಿ ವೆಚ್ಚದ ಯೋಜನೆಗಳನ್ನು ಹೈದರಾಬಾದ್ನಲ್ಲಿ ಜಾರಿಗೊಳಿಸಿದೆ. ಸಿಕಂದರಬಾದ್–ತಿರುಪತಿ ನಡುವೆ ವಂದೇ ಭಾರತ್ ರೈಲು ವ್ಯವಸ್ಥೆ, ಬಿಬಿನಗರದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಹಾಗೂ ತೆಲಂಗಾಣ–ಆಂಧ್ರದ ನಡುವೆ ರಾಷ್ಟ್ರೀಯ ಹೆದ್ದಾರಿ ಹೀಗೆ ಹಲವು ಪ್ರಮುಖ ಯೋಜನೆಗಳನ್ನು ಹೈದರಾಬಾದ್ನಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಎಲ್ಲ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆಗೆ ಪ್ರಧಾನಿ ಹೈದರಬಾದ್ಗೆ ಭೇಟಿ ನೀಡಲಿದ್ಧಾರೆ ಎಂದು ಪಿಟಿಐ ವರದಿ ಮಾಡಿದೆ.
ತಿರುಪತಿ ಯಾತ್ರಾತ್ರಿಗಳಿಗೆ ಉಪಯೋಗವಾಗಲೆಂದು ಸಿಕಂದರಬಾದ್–ತಿರುಪತಿ ನಡುವೆ ವಂದೇ ಭಾರತ್ ರೈಲು ಯೋಜನೆಯನ್ನು ಮೂರು ತಿಂಗಳ ಅಲ್ಪಾವಧಿಯಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಸುಮಾರು ₹720 ಕೋಟಿ ಕೇಂದ್ರ ಸರ್ಕಾರ ವ್ಯಯಿಸಿತ್ತು.ಏಪ್ರಿಲ್ 8ರಂದ ಈ ರೈಲು ಯೋಜನೆಗೆ ಪ್ರಧಾನಿಯಿಂದ ಚಾಲನೆ ದೊರೆಯಲಿದೆ. ಇದೇ ವೇಳೆ 13 ಹೊಸ ಮಲ್ಟಿ–ಮಾಡೆಲ್ ಟ್ರಾನ್ಸ್ಪೋರ್ಟ್ ಸರ್ವೀಸ್ ಸೇವೆಗಳಿಗೂ ಚಾಲನೆ ನೀಡಲಿದ್ದಾರೆ.
ಹೈದರಾಬಾದ್ನ ಬಿಬಿನಗರದಲ್ಲಿ ಸುಮಾರು ₹1350 ಕೋಟಿ ವೆಚ್ಚದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜಿಸಿದ್ದು,ಈ ಯೋಜನೆಯ ಶಂಕು ಸ್ಥಾಪನೆಯನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. ಇದರ ಜೊತೆಗೆ ₹7,850 ಕೋಟಿ ವೆಚ್ಚದಲ್ಲಿ ತೆಲಂಗಾಣ–ಆಂಧ್ರಪ್ರದೇಶದ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಯೋಜನೆಗೂ ಶಂಕು ಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ಧಾರೆ.
ಹೈದರಾಬಾದ್ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಭೇಟಿ ಮಾಡಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.