ADVERTISEMENT

ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು; ಚನ್ನಿ, ಸೋನಿ ವಿರುದ್ಧ ಜಾಖಡ್ ಕಿಡಿ

ಪಿಟಿಐ
Published 14 ಮಾರ್ಚ್ 2022, 22:07 IST
Last Updated 14 ಮಾರ್ಚ್ 2022, 22:07 IST
ಸುನಿಲ್ ಜಾಖಡ್
ಸುನಿಲ್ ಜಾಖಡ್   

ಚಂಡಿಗಡ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಚರಣ್‌ಜಿತ್ ಸಿಂಗ್ ಚನ್ನಿ ಹೊಣೆಗಾರರು ಎಂದು ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುನಿಲ್ ಜಾಖಡ್ ಆರೋಪಿಸಿದ್ದಾರೆ. ‘ಚನ್ನಿ ಅವರ ದುರಾಸೆಯು ಪಕ್ಷವನ್ನು ಪತನಕ್ಕೆ ತಳ್ಳಿತು’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿಅವರ ವಿರುದ್ಧವೂ ಜಾಖಡ್ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ)ಪಂಜಾಬ್ ಸೋಲಿನ ಕುರಿತಂತೆ ಚರ್ಚೆ ನಡೆಯಿತು. ನಿರ್ಗಮಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಬೆಂಬಲಕ್ಕೆ ರಾಜ್ಯದ ಕಾಂಗ್ರೆಸ್ ಮುಖಂಡರು ನಿಲ್ಲದ ಕಾರಣದಿಂದ ಪಕ್ಷಕ್ಕೆ ಸೋಲಾಯಿತು ಎಂಬ ಅರ್ಥದಲ್ಲಿ ಚರ್ಚೆ ನಡೆಯಿತು.

‘ಚನ್ನಿ ಅವರು ಪಕ್ಷದ ಆಸ್ತಿಯೇ. ಅಲ್ಲ ಅವರು ಪಕ್ಷದ ಸೋಲಿಗೆ ಹೊಣೆಗಾರರು. ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಮೊದಲು ಶಿಫಾರಸು ಮಾಡಿದ ಮಹಿಳೆಯ ಪಾಲಿಗೆ ಅವರು ಆಸ್ತಿ ಆಗಿರಬಹುದು. ಅದೃಷ್ಟವಶಾತ್, ಸಿಡಬ್ಲುಸಿ ಸಭೆಯಲ್ಲಿ ಚನ್ನಿ ಅವರನ್ನು ರಾಷ್ಟ್ರೀಯ ಸೊತ್ತು ಎಂದು ಘೋಷಿಸಲಿಲ್ಲ’ ಎಂದು ಜಾಖಡ್ ವ್ಯಂಗ್ಯದ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ. ಚನ್ನಿ ಅವರ ಸಂಬಂಧಿಯನ್ನು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ ವಿಚಾರವನ್ನು ಜಾಖಡ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

*

ಆಡಂಬರದ ವ್ಯಕ್ತಿತ್ವದ ಸಿಧು, ಭ್ರಷ್ಟಾಚಾರಿ ಚನ್ನಿ ಅವರಿಗೆ ಕಾಂಗ್ರೆಸ್ ಯಾವಾಗ ಮಣೆ ಹಾಕಿತೋ, ಅಂದೇ ಪಂಜಾಬ್‌ನಲ್ಲಿ ತನ್ನ ಗೋರಿ ತೋಡಿಕೊಂಡಿತು.
-ಕ್ಯಾಪ್ಟನ್ ಅಮರಿಂದರ್ ಸಿಂಗ್‌,ಮಾಜಿ ಮುಖ್ಯಮಂತ್ರಿ

*

ಸೋನಿಯಾ ಕುಟುಂಬಕ್ಕೆ ಪಕ್ಷ ಮುನ್ನಡೆಸುವ ಶಕ್ತಿ ಇಲ್ಲ ಇದು ಮುಂದುವರಿದರೆ, ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್ ಕಾಣಿಸುವುದಿಲ್ಲ.
-ಹಿಮಂತ್ ಬಿಸ್ವ ಶರ್ಮಾ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.