ಚಂಡೀಗಡ: ಮೂರೂ ಕೃಷಿ ಕಾಯ್ದೆಗಳ ರದ್ಧತಿಗೆ ಒತ್ತಾಯಿಸಿ ರೈತ ಸಮೂಹ ನವದೆಹಲಿಯ ಒಳಗೂ ಹೊರಗೂ ಪ್ರತಿಭಟನೆ ನಡೆಸುತ್ತಿದೆ. ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಹಲವರು ಅನ್ನದಾತನಿಗೆ ಬೆಂಬಲ ಸೂಚಿಸಿದ್ದಾರೆ. ಇದೀಗ, ಪಂಜಾಬಿನ ಕುಟುಂಬವೊಂದು ತಮ್ಮ ಮದುವೆ ಉಡುಗೊರೆ ಬದಲಿಗೆ ರೈತರಿಗೆ ಡೊನೇಶನ್ ನೀಡುವಂತೆ ಮನವಿ ಮಾಡಿದೆ.
ಮದುವೆಯ ಸ್ಥಳದಲ್ಲಿ ಡೊನೇಶನ್ ಪೆಟ್ಟಿಗೆ ಇಟ್ಟಿರುವ ಕುಟುಂಬ ಮದುವೆಗೆ ಬರುವ ಬಂಧುಗಳು ಮತ್ತು ಸ್ನೇಹಿತರಿಗೆ ರೈತರಿಗಾಗಿ ಉದಾರವಾಗಿ ಡೊನೇಶನ್ ನೀಡುವಂತೆ ಡ್ಯಾನ್ಸ್ ಫ್ಲೋರ್ ಮೂಲಕ ಮನವಿ ಮಾಡಿದ್ದಾರೆ.
"ವಧುವರರಿಗೆ ಉಡುಗೊರೆ ಕೊಡುವ ಬದಲು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗಾಗಿ ದಾನ ಮಾಡಿ. ಈ ಹಣವನ್ನು ರೈತರಿಗೆ ಆಹಾರ, ಬೆಚ್ಚನೆಯ ಉಡುಗೆ, ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಲು ಬಳಸುತ್ತೇವೆ ," ಎಂದು ಕುಟುಂಬ ವರ್ಗ ಘೋಷಣೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ
ಚಂಡೀಗಡದಿಂದ 250 ಕಿ.ಮಿ ದೂರದಲ್ಲಿರುವ ಪಂಜಾಬಿನ ಮುಕ್ತಸರ್ನಲ್ಲಿ ಕುಟುಂಬವೊಂದು ಇಂತಹ ರೈತೋಪಯೋಗಿ ಕೆಲಸ ಮಾಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳು ತಮ್ಮ ಆದಾಯ ಕುಗ್ಗಿಸುವ ಜೊತೆಗೆ ಕಾರ್ಪೊರೇಟ್ ಶೋಷಣೆಗೆ ಒಳಪಡಿಸಲಿವೆ ಎಂಬ ಆತಂಕದಲ್ಲಿ ಹಗಲಿರುಳೆನ್ನದೆ ಮೈಕೊರೆವ ಚಳಿಯಲ್ಲೂ ಹೋರಾಟ ನಡೆಸುತ್ತಿದ್ದಾರೆ. ಇತ್ತ, ಕೇಂದ್ರ ಸರ್ಕಾರ, ಹೊಸ ಕಾಯ್ದೆಗಳು ಮಧ್ಯವರ್ತಿಗಳ ಕಾಟ ತಪ್ಪಿಸಲಿದ್ದು, ರೈತರು ಉತ್ಪನ್ನಗಳನ್ನ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತವೆ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.