ರಾಹುಲ್ ಗಾಂಧಿ, ಚುನಾವಣಾ ಆಯೋಗ
(ಪಿಟಿಐ ಚಿತ್ರ)
ನವದೆಹಲಿ: ಮತಗಳ್ಳತನ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪ ಆಧಾರರಹಿತವಾಗಿದೆ ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.
ಇಂತಹ ಬೇಜವಾಬ್ದಾರಿಯುತ ಹೇಳಿಕೆಯನ್ನು ನಿರ್ಲಕ್ಷಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದೆ.
'ಚುನಾವಣಾ ಆಯೋಗವು ಬಿಜೆಪಿಗಾಗಿ ಮತಗಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ಶೇಕಡ 100ರಷ್ಟು ಪುರಾವೆಗಳಿವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
'ಸಾಕ್ಷ್ಮಗಳನ್ನು ನಾವು ಬೇಗನೇ ಬಿಡುಗಡೆಗೊಳಿಸಲಿದ್ದೇವೆ. ನಾವು ನಮ್ಮದೇ ಆದ ತನಿಖೆಯನ್ನು ನಡೆಸಿದ್ದೇವೆ. ಇದಕ್ಕಾಗಿ ಆರು ತಿಂಗಳು ಬೇಕಾಯಿತು. 'ಅಣು ಬಾಂಬ್'ನಂತಹ ಪುರಾವೆಯನ್ನು ನಾವು ಹೊಂದಿದ್ದೇವೆ. ಇದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ಮರೆಮಾಚಲು ಸಾಧ್ಯವಾಗುವುದಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
'ದಿನನಿತ್ಯ ಮಾಡಲಾಗುತ್ತಿರುವ ಇಂತಹ ನಿರಾಧಾರ ಆರೋಪಗಳನ್ನು ಚುನಾವಣಾ ಆಯೋಗವು ನಿರ್ಲಕ್ಷಿಸುತ್ತದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಿ ನ್ಯಾಯ ಹಾಗೂ ಪಾರದರ್ಶಕ ರೀತಿಯಲ್ಲಿ ಕೆಲಸ ಮುಂದುವರಿಸುವಂತೆ ಅಧಿಕಾರಿಗಳನ್ನು ಕೇಳಿಕೊಳ್ಳುತ್ತೇವೆ' ಎಂದು ರಾಹುಲ್ ಟೀಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.