ಕೋಲ್ಕತ್ತ: ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಮಮತಾ ಬ್ಯಾನರ್ಜಿ ಪ್ರಯತ್ನಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ರ್ಯಾಲಿಯ ಬಗ್ಗೆರಾಹುಲ್ ಮೌನವಾಗಿದ್ದದ್ದು ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ,ರಾಹುಲ್ ಅವರು ಮಮತಾ ಅವರಿಗೆ ಶುಕ್ರವಾರ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ.
‘ದೇಶದಾದ್ಯಂತ ಪ್ರಬಲ ಶಕ್ತಿಯೊಂದು ರೂಪುಗೊಂಡಿದೆ. ಮೋದಿ ಸರ್ಕಾರದ ಹುಸಿ ಭರವಸೆಗಳು ಮತ್ತು ಸುಳ್ಳುಗಳಿಂದ ಲಕ್ಷಾಂತರ ಭಾರತೀಯರಿಗೆ ಬಂದಿರುವ ಸಿಟ್ಟು ಮತ್ತು ಆಗಿರುವ ನಿರಾಶೆ ಈ ಶಕ್ತಿಗಳನ್ನು ಇನ್ನಷ್ಟು ಬಲಪಡಿಸಿದೆ’ ಎಂದು ಪತ್ರದಲ್ಲಿರಾಹುಲ್ ಹೇಳಿದ್ದಾರೆ.
* ಇದನ್ನೂ ಓದಿ:ಲೋಕಸಭೆ ಚುನಾವಣೆ: ಮಾರ್ಚ್ನಲ್ಲಿ ವೇಳಾಪಟ್ಟಿ?
ಆದರೆ,ರಾಹುಲ್ ಪತ್ರ ಬರೆದಿರುವ ಬೆಳವಣಿಗೆಯು ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕಕ್ಕೆ ಇರುಸು ಮುರುಸು ಉಂಟು ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ತೃಣಮೂಲ ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.
ಮಮತಾ ಆಯೋಜಿಸಿರುವ ಸಮಾವೇಶಕ್ಕೆರಾಹುಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸೋಮೇನ್ ಮಿತ್ರಾ ಹೇಳಿದ್ದಾರೆ.
‘ಬಿಜೆಪಿ ವಿರುದ್ಧದ ಹೋರಾಟಕ್ಕೆರಾಹುಲ್ ಅವರು ನೈತಿಕ ಬೆಂಬಲ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗಾಗಿ ರೂಪುಗೊಂಡಿರುವ ಎಸ್ಪಿ–ಬಿಎಸ್ಪಿ ಮೈತ್ರಿಯಲ್ಲಿ ಕಾಂಗ್ರೆಸ್ ಸೇರಿಲ್ಲದಿದ್ದರೂರಾಹುಲ್ ಬೆಂಬಲ ಘೋಷಿಸಿದ್ದಾರೆ’ ಎಂಬುದನ್ನು ಮಿತ್ರಾ ನೆನಪಿಸಿದ್ದಾರೆ.
* ಇವನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.