ADVERTISEMENT

ಆರ್‌ಬಿಐ ಸ್ವಾಯತ್ತತೆ ಅತ್ಯಗತ್ಯ ಎಂದ ಹಣಕಾಸು ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 9:00 IST
Last Updated 31 ಅಕ್ಟೋಬರ್ 2018, 9:00 IST
   

ನವದೆಹಲಿ: ರಿಸರ್ವ್‌ ಬ್ಯಾಂಕ್‌ನಸ್ವಾಯತ್ತತೆ ಕಾಪಾಡುವುದು ಅತ್ಯಗತ್ಯ. ಇದು ದೇಶದ ಹಣಕಾಸು ಆಡಳಿತದಲ್ಲಿ ಒಪ್ಪಿಕೊಂಡಿರುವ ಸಂಗತಿಯೇ ಆಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ರಿಸರ್ವ್‌ ಬ್ಯಾಂಕ್‌ ಜೊತೆಗೆ ಸರ್ಕಾರ ಹಗ್ಗಜಗ್ಗಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

‘ಸಾರ್ವಜನಿಕ ಹಿತಾಸಕ್ತಿಯನ್ನೇ ಗಮನದಲ್ಲಿರಿಸಿಕೊಂಡು ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ತಮ್ಮ ಕಾರ್ಯನಿರ್ವಹಿಸಬೇಕು. ಇದೇ ಕಾರಣಕ್ಕೆ ಸರ್ಕಾರ ಮತ್ತು ಆರ್‌ಬಿಐ ನಡುವೆ ಕಾಲಕಾಲಕ್ಕೆ ಸುದೀರ್ಘ ಸಮಾಲೋಚನೆಗಳು ನಡೆಯುತ್ತವೆ. ಇತರ ನಿಯಂತ್ರಕರ ಜೊತೆಗೂ ಸರ್ಕಾರ ಇಂಥದ್ದೇ ಸಂಬಂಧ ಹೊಂದಿದೆ’ ಎಂದು ಹಣಕಾಸು ಇಲಾಖೆಯ ಹೇಳಿಕೆ ತಿಳಿಸಿದೆ.

‘ಇಂಥ ಸಮಾಲೋಚನೆಗಳನ್ನು ಸರ್ಕಾರ ಬಹಿರಂಗಪಡಿಸುವುದಿಲ್ಲ. ಆದರೆ ಸಮಾಲೋಚನೆಗಳನ್ನು ಆಧರಿಸಿ ತೆಗೆದುಕೊಂಡ ನಿರ್ಣಯಗಳನ್ನು ಮಾತ್ರ ಬಹಿರಂಗಪಡಿಸಲಾಗುತ್ತದೆ. ಸಮಾಲೋಚನೆಗಳಲ್ಲಿ ಸರ್ಕಾರ ವಿವಿಧ ವಿಚಾರಗಳ ಬಗ್ಗೆ ಸಂಭವನೀಯ ಪರಿಹಾರಗಳನ್ನು ಸೂಚಿಸುತ್ತದೆ. ಇನ್ನು ಮುಂದೆಯೂ ಸರ್ಕಾರ ಇದೇ ರೀತಿ ಕೆಲಸ ಮಾಡುತ್ತದೆ’ ಎಂದು ಹೇಳಿಕೆ ತಿಳಿಸಿದೆ.

ರಿಸರ್ವ್‌ ಬ್ಯಾಂಕ್ ಜೊತೆಗೆ ಕೇಂದ್ರ ಸರ್ಕಾರದ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಹೇಳಿಕೆ ಹೊರಡಿಸಿದೆ.ಆರ್‌ಬಿಐ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದೆ ಎಂದೂ ಬಳಸದಿದ್ದ ಕೆಲ ನಿಯಮಗಳಡಿ ಶಕ್ತಿಪ್ರಯೋಗ ಮಾಡಿದೆ. ಇದರಿಂದ ಬೇಸತ್ತಿರುವ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.