ಹೈದರಾಬಾದ್: ತೆಲಂಗಾಣದ ಎರಡು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಇದೇ 14ರಂದು ನಡೆಯಲಿರುವ ಚುನಾವಣೆಯ ಪ್ರಚಾರ ದಿನ ಕಳೆದಂತೆ ಬಿರುಸಿನಿಂದ ಸಾಗಿದ್ದು, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಪುತ್ರಿಎಸ್. ವಾಣಿ ದೇವಿ ಅವರು ಟಿಆರ್ಎಸ್ ಅಭ್ಯರ್ಥಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಖಮ್ಮಮ್- ನಲಗೊಂಡ-ವಾರಂಗಲ್ ಮತ್ತು ಹೈದರಾಬಾದ್-ರಂಗರೆಡ್ಡಿ-ಮೆಹಬೂಬ್ನಗರ – ಈ ಎರಡು ಪದವೀಧರರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಕಳೆದ ವರ್ಷ ಡುಬ್ಬಾಕ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ್ತು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉಂಟಾದ ಅನಿರೀಕ್ಷಿತ ಹಿನ್ನಡೆಯಿಂದ ಎಚ್ಚೆತ್ತುಕೊಂಡಿರುವ ಆಡಳಿತಾರೂಢ ಟಿಆರ್ಎಸ್ ಪಕ್ಷ, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಎರಡೂ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಕಸರತ್ತು ನಡೆಸುತ್ತಿದೆ.
ಶಿಕ್ಷಣ ತಜ್ಞೆ ಎಸ್. ವಾಣಿ ದೇವಿ ಅವರನ್ನು ಹೈದರಾಬಾದ್–ರಂಗಾರೆಡ್ಡಿ–ಮಹಬೂಬ್ನಗರ ಕ್ಷೇತ್ರದಿಂದ ಟಿಆರ್ಎಸ್ ಕಣಕ್ಕಿಳಿಸುತ್ತಿದೆ. ಸದ್ಯ ಆ ಕ್ಷೇತ್ರದಲ್ಲಿ ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಹಾಲಿ ಎಂಎಲ್ಸಿ ಎನ್. ರಾಮಚಂದ್ರರಾವ್ ಕಣದಲ್ಲಿದ್ದಾರೆ.
ವಾಣಿ ದೇವಿ ಅವರು, ಉಪನ್ಯಾಸಕರಾಗಿದ್ದು, ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ರಾಮಚಂದ್ರ ರಾವ್ ಅವರು ಹಿರಿಯ ವಕೀಲರು.
ಖಮ್ಮಮ್- ನಲಗೊಂಡ-ವಾರಂಗಲ್ ಕ್ಷೇತ್ರದಲ್ಲಿ ಹಾಲಿ ಶಾಸಕ ಪಲ್ಲ ರಾಜೇಶ್ವರ ರೆಡ್ಡಿ ಅವರು ಟಿಆರ್ಎಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ನಿಂದ ರಾಮುಲು ನಾಯ್ಕ್ ಮತ್ತು ಬಿಜೆಪಿಯಿಂದ ಜಿ.ಪ್ರೇಮೆಂದರ್ ರೆಡ್ಡಿ ಕಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.