
ನವದೆಹಲಿ: ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್ಲೈನ್ಸ್ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಿಕರ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
ಚೆನ್ನೈ ಎಗ್ಮೋರ್–ಚರ್ಲಪಲ್ಲಿ (ತೆಲಂಗಾಣ) ಮತ್ತು ಸಿಕಂದರಾಬಾದ್-ಚೆನ್ನೈ ಎಗ್ಮೋರ್ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ಇದಲ್ಲದೆ, ಜನದಟ್ಟಣೆ ನಿಯಂತ್ರಿಸಲು ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳು ಸೇರಿದಂತೆ ಈಗಾಗಲೇ ಸಂಚರಿಸುತ್ತಿರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವುದಾಗಿ ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ವಿವರಿಸಿದೆ.
ವಿಶೇಷ ಎಕ್ಸ್ಪ್ರೆಸ್ ರೈಲು ಇಂದು (ಶನಿವಾರ) ರಾತ್ರಿ 11.55ಕ್ಕೆ ಚೆನ್ನೈ ಎಗ್ಮೋರ್ನಿಂದ ಹೊರಟು ನಾಳೆ (ಭಾನುವಾರ) ಮಧ್ಯಾಹ್ನ 2 ಗಂಟೆಗೆ ಚರ್ಲಪಲ್ಲಿಗೆ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬೈ, ಕೋಲ್ಕತ್ತ, ಸೂರತ್, ಚೆನ್ನೈ, ಜೈಪುರ, ದೆಹಲಿ, ಬೆಂಗಳೂರು, ಇಂದೋರ್, ಭೋಪಾಲ್ ವಿಮಾನ ನಿಲ್ದಾಣಗಳಲ್ಲಿ ಗುರುವಾರ ಮತ್ತು ಶುಕ್ರವಾರ ಇಂಡಿಗೊ ವಿಮಾನಗಳು ಹಾರಾಟ ನಡೆಸಲಿಲ್ಲ. ಹೀಗಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.