ADVERTISEMENT

ಮಾನನಷ್ಟ ಮೊಕದ್ದಮೆ: ಸುಬ್ರಮಣಿಯನ್ ಸ್ವಾಮಿಗೆ ದೆಹಲಿ ನ್ಯಾಯಾಲಯ ಸಮನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 16:25 IST
Last Updated 22 ಮಾರ್ಚ್ 2022, 16:25 IST
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ   

ನವದೆಹಲಿ: ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿಯ ನ್ಯಾಯಾಲಯ ಸೂಚಿಸಿದೆ.

ಬಿಜೆಪಿ ನಾಯಕ ತಜಿಂದರ್ ಬಗ್ಗಾ ಅವರು ಸುಬ್ರಮಣಿಯನ್ ಸ್ವಾಮಿ ವಿರುದ್ಧ ಇತ್ತೀಚೆಗೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸ್ವಾಮಿ ಅವರು ಮಾಡಿದ್ದ ಟ್ವೀಟೊಂದನ್ನು ಆಧರಿಸಿ ತಜಿಂದರ್ ಮೊಕದ್ದಮೆ ಹೂಡಿದ್ದರು. ಸ್ವಾಮಿ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿರುವ ಅಂಶವು ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ. ತಮ್ಮ ಪ್ರತಿಷ್ಠೆಗೆ ಹಾಗೂ ವರ್ಚಸ್ಸಿಗೆ ಧಕ್ಕೆ ತುರುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಆರೋಪಿಸಿರುವ ತಜಿಂದರ್, ಟ್ವೀಟ್‌ನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಬಿಜೆಪಿ ಸೇರುವುದಕ್ಕೂ ಮೊದಲು ತಜಿಂದರ್ ಅವರನ್ನು ಅಪರಾಧ ಕೃತ್ಯಗಳನ್ನು ಎಸಗಿದ್ದಕ್ಕಾಗಿ ಹಲವು ಬಾರಿ ನವದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆ ಪೊಲೀಸರು ಜೈಲಿಗಟ್ಟಿದ್ದರು ಎಂದು ನನಗೆ ದೆಹಲಿಯ ಪತ್ರಕರ್ತರು ತಿಳಿಸಿದ್ದಾರೆ. ಇದು ನಿಜವೇ? ಹೌದಾಗಿದ್ದರೆ ನಡ್ಡಾ ಅವರಿಗೆ ಗೊತ್ತಿರಬೇಕು’ ಎಂದು ಸ್ವಾಮಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.