ADVERTISEMENT

ರಾಮಮಂದಿರ ಉದ್ಘಾಟನೆ: ಅಯೋಧ್ಯೆಗೆ ಬಂದಿಳಿದ ಗಣ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2024, 13:26 IST
Last Updated 21 ಜನವರಿ 2024, 13:26 IST
   

ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಾಲಿವುಡ್‌ ಸೇರಿದಂತೆ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಭಾನುವಾರವೇ ಅಯೋಧ್ಯೆಗೆ ಬಂದಿಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರೊಂದಿಗೆ ಮಂದಿರದ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಲಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾನುವಾರ ಸಂಜೆಯೇ ಲಖನೌ ತಲುಪಿದರು.

ಮೆಗಾಸ್ಟಾರ್ ರಜನಿಕಾಂತ್‌, ನಟಿ ಕಂಗನಾ ರನೌತ್‌, ತೆಲುಗು ಸಿನಿಮಾ ನಟ ಪವನ್ ಕಲ್ಯಾಣ್, ಸಂಗೀತ ನಿರ್ದೇಶಕ ಅನು ಮಲಿಕ್‌, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಗಾಯಕ ಶಂಕರ್‌ ಮಹಾದೇವನ್ ಅವರೂ ಉತ್ತರ ಪ್ರದೇಶ ರಾಜಧಾನಿಗೆ ಬಂದಿಳಿದರು.

ADVERTISEMENT

ಕಂಗನಾ ರನೌತ್‌, ಅಯೋಧ್ಯೆಯ ಹನುಮಾನ್ ಗಾಂಧಿ ದೇಗುಲವನ್ನು ಸ್ವಚ್ಛಗೊಳಿಸಲು ಸಹಕರಿಸಿದರು ಮತ್ತು ನಗರದ ಪ್ರಮುಖ ಸಂತರನ್ನು ಭೇಟಿಯಾದರು.

ಮಹಾದೇವನ್‌ ಅವರು, ‘ದೇಶ ಮಾತ್ರವಲ್ಲದೆ, ಇಡೀ ಜಗತ್ತೇ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕಾತರದಿಂದ ಕಾಯುತ್ತಿದೆ’ ಎಂದು ಹೇಳಿದರು.

ಖ್ಯಾತ ಬಾಣಸಿಗ ಸಂಜೀವ್ ಕಪೂರ್‌, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌, ಯೋಗ ಗುರು ಸ್ವಾಮಿ ರಾಮ್‌ದೇವ್‌, ಹಿಂದಿ ಕವಿ ಕುಮಾರ್‌ ವಿಶ್ವಾಸ್‌ ಅವರೂ ಮಂದಿರ ನಗರವನ್ನು ತಲುಪಿದ್ದಾರೆ.

ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್‌ ಅವರು ಸೋಮವಾರ ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.