ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಶ್ರೀನಗರ : ಕಾನ್ಸ್ಟೆಬಲ್ ಒಬ್ಬರಿಗೆ ಕಸ್ಟಡಿ ಹಿಂಸೆ ನೀಡಿದ ಪ್ರಕರಣದಲ್ಲಿ ಕನಿಷ್ಠ ಇಬ್ಬರು ಅಧಿಕಾರಿಗಳು ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇವರನ್ನು ಬಂಧಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳು ನಿರ್ದೇಶಿಸಿತ್ತು.
ಬಂಧಿತರಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ, ಓರ್ವ ಇನ್ಸ್ಪೆಕ್ಟರ್ ಹಾಗೂ ಓರ್ವ ಸಹಾಯ ಸಬ್ ಇನ್ಸ್ಪೆಕ್ಟರ್ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ಇತರ ಸರ್ಕಾರಿ ಸ್ವತ್ತುಗಳನ್ನು ಆಯಾ ಜಿಲ್ಲಾ ಪೊಲೀಸರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬರಾದ ಗೌರವಧನದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ವಜಾಮಾಡಲಾಗಿದೆ.
ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತಯು ಕಾಶ್ಮೀರದ ಪೊಲೀಸ್ ಕಾನ್ಸ್ಟೆಬಲ್ಗೆ ಕ್ರೂರ ಮತ್ತು ಅಮಾನವೀಯ ಕಸ್ಟಡಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಜುಲೈ 21ರಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಅಲ್ಲದೆ ಸಂತ್ರಸ್ತ ಕಾನ್ಸ್ಟೆಬಲ್ಗೆ 50 ಲಕ್ಷ ಪರಿಹಾರ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ಸೂಚಿಸಿತ್ತು.
ಕಾನ್ಸ್ಟೆಬಲ್ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಅವರ ಜನಾನಾಂಗಕ್ಕೆ ಮೆಣಸಿನ ಪುಡಿ ಹಾಕಿ, ವಿದ್ಯುತ್ ಶಾಕ್ ನೀಡಿರುವುದು ಅಮಾನವೀಯ ಚಿತ್ರಹಿಂಸೆಯ ಪ್ರತೀಕ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ನೇತೃತ್ವದ ನ್ಯಾಯಪೀಠ ಹೇಳಿತ್ತು.
‘ಇದು ಅತಿರೇಕದ ವರ್ತನೆ. ಈ ಘಟನೆ ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕಲಕಿದೆ. ಇದು ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘಟನೆ’ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳನ್ನು ಒಂದು ತಿಂಗಳೊಳಗೆ ಬಂಧಿಸಿ, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ನೇತೃತ್ವದ ನ್ಯಾಯಪೀಠ ಸಿಬಿಐಗೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.