
ಸುಪ್ರೀಂ ಕೋರ್ಟ್
ನವದೆಹಲಿ: ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಂದಾಜು ₹100 ಕೋಟಿ ಮೌಲ್ಯದ 13 ಎಕರೆ ಭೂಕಬಳಿಕೆಗೆ ಯತ್ನಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅವಲಹಳ್ಳಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ವೆಂಕಟರಾಮ ನಾಯ್ಡು ಕೋಲ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠ ವಜಾಗೊಳಿಸಿದೆ.
ಸಿವಿಲ್ ಮೊಕದ್ದಮೆಗಳು ಬಾಕಿ ಇದ್ದ ಮಾತ್ರಕ್ಕೆ ಗಂಭೀರ ಅಪರಾಧಗಳ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಹೈಕೋರ್ಟ್, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿತ್ತು.
ಜಮೀನಿನ ಮೂಲ ಮಾಲೀಕರಾದ ಆರ್. ರಾಧಾ (ಜಿಪಿಎ ಪಡೆದಿರುವ ವೆಂಕಟಪ್ಪ ಕೆ. ದೂರುದಾರರು) ಅವರ ಪತಿ ಎಸ್. ಕೃಷ್ಣನ್ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬಂಡಾಪುರ ಗ್ರಾಮದ 3 ವಿವಿಧ ಸರ್ವೆ ನಂಬರ್ಗಳಲ್ಲಿ 13 ಎಕರೆ 29 ಗುಂಟೆಗಳನ್ನು 1978ರಲ್ಲಿ ಖರೀದಿಸಿದ್ದರು. ಕೃಷ್ಣನ್ 1986ರಲ್ಲಿ ಮೃತಪಟ್ಟಿದ್ದರು. ಎಲ್ಲ ಆಸ್ತಿಗಳಿಗೆ ಪತ್ನಿ ರಾಧಾ ಉತ್ತರಾಧಿಕಾರಿಯಾಗಿದ್ದರು. ಪತಿಯ ಮರಣದ ನಂತರ ತಮಿಳುನಾಡಿನ ತವರು ಮನೆಗೆ ತೆರಳಿದ್ದ ರಾಧಾ ಆಗಾಗ ಬೆಂಗಳೂರಿನಲ್ಲಿರುವ ಜಮೀನುಗಳಿಗೆ ಭೇಟಿ ನೀಡುತ್ತಿದ್ದರು.
ಈ ನಡುವೆ, ಕೆಲವು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಯತ್ನಿಸಿದ್ದರು. ನಾಲ್ವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ರಾಧಾ ಹೆಸರಿನಲ್ಲಿ ಸಹಿ ಹಾಕಿದ್ದರು. ವೆಂಕಟಪ್ಪ ಅವರು ಆವಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಸತ್ವ ಗ್ರೂಪ್ನ ಪಾಲುದಾರ ಅಶ್ವಿನ್ ಸಂಚೆಟಿ, ಬಸವೇಶ್ವರ ನಗರದ ನಿವಾಸಿ ರಾಧಾ, ಲೋಕ ಸುಂದರ್, ಧ್ರುವ ಕುಮಾರ್, ಮೀನಾಕ್ಷಿ, ಲಾವಣ್ಯ, ಡಾಲರ್ಸ್ ಕಾಲೊನಿಯ ನಿವಾಸಿ ರಾಧಾ, ವೆಂಕಟರಾಮ ನಾಯ್ಡು ಕೋಲ, ಶಿವರುದ್ರಪ್ಪ, ಶ್ರೀನಿವಾಸ್ ಆರ್. ಅಲಕಟ್ಟಿ, ಲಿಂಗರಾಜ್, ಮಧುಸೂದನ್ ಮತ್ತು ಮುನೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ‘ಅಶ್ವಿನ್ ಸಂಚೆಟಿ ಹಾಗೂ ಸತ್ವ ಗ್ರೂಪ್ ವಿರುದ್ಧ ದೂರುದಾರರು ಮಾಡಿರುವ ಆರೋಪಗಳಿಗೂ, ವಾಸ್ತವ ಸ್ಥಿತಿಗೂ ವ್ಯತ್ಯಾಸವಿದೆ. ನಮ್ಮ ಬಳಿ ದಾಖಲೆಗಳಿವೆ’ ಎಂದು ಸತ್ವ ಗ್ರೂಪ್ ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.