ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳಿದ್ದ ಎಸ್ಯುವಿ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ(ಎನ್ಐಎ), ತನಿಖೆಯ ಭಾಗವಾಗಿ ಘಟನೆ ನಡೆದ ಸ್ಥಳದಲ್ಲಿ ಕೃತ್ಯದ ಸನ್ನಿವೇಶವನ್ನುಮರು ಸೃಷ್ಟಿಸಿತು.
‘ಪ್ರಕರಣದ ಆರೋಪಿಯಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು, ಅಪರಾಧದ ಸನ್ನಿವೇಶವನ್ನು ಮರು ಸೃಷ್ಟಿಸಲಾಯಿತು.ಈ ವೇಳೆ ತನಿಖಾಧಿಕಾರಿಗಳು ವಾಜೆ ಅವರಿಗೆ ಬಿಳಿ ಕುರ್ತಾ ಧರಿಸಿ ಸ್ವಲ್ಪ ದೂರದವರೆಗೆ ನಡೆದಾಡುವಂತೆ ಸೂಚಿಸಿದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಘಟನೆ ನಡೆದ ದಿನ ಕಾರ್ಮೈಕಲ್ ರಸ್ತೆಯಲ್ಲಿ ಬಿಳಿ ಖುರ್ತಾ ಧರಿಸಿದ್ದ ವ್ಯಕ್ತಿಯೊಬ್ಬರು ಓಡಾಡುತ್ತಿದ್ದುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆ ವ್ಯಕ್ತಿ ವಾಜೆಯಾಗಿರಬಹುದು ಎಂದು ಎನ್ಐಎ ಅಧಿಕಾರಿಗಳು ಶಂಕಿಸಿದ್ದರು. ಆದರೆ, ಅದು ಇನ್ನೂ ಖಚಿತವಾಗಬೇಕಿದೆ‘ ಎಂದು ಅಧಿಕಾರಿ ಹೇಳಿದ್ದಾರೆ.
‘ಶುಕ್ರವಾರ ರಾತ್ರಿ ವಾಜೆ ಮತ್ತು ತನಿಖಾಧಿಕಾರಿಗಳು 30 ನಿಮಿಷಗಳಿಗೂ ಹೆಚ್ಚು ಕಾಲ ಘಟನಾ ಸ್ಥಳದಲ್ಲಿದ್ದರು. ಅಪರಾಧದ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಫೆ. 25 ರಂದು ಮುಕೇಶ್ ಅಂಬಾನಿಯ ಬಹುಮಹಡಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು ತುಂಬಿದ ಎಸ್ಯುವಿ ವಾಹನ ಮತ್ತು ಅದರೊಳಗೆ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.