ADVERTISEMENT

ಪೊಲೀಸರು ಅಪ್ಪ-ಮಗನಿಗೆ ರಾತ್ರಿಯಿಡೀ ಥಳಿಸಿದ್ದರು: ಹೆಡ್‌ಕಾನ್‌ಸ್ಟೆಬಲ್ ಸಾಕ್ಷ್ಯ

ಪಿಟಿಐ
Published 1 ಜುಲೈ 2020, 10:01 IST
Last Updated 1 ಜುಲೈ 2020, 10:01 IST
ಜಯರಾಜ್ ಮೃತದೇಹವನ್ನು ಮನೆಗೆ ಕರೆದುಕೊಂಡು ಬಂದಾಗ (ಕೃಪೆ: ಎಎಫ್‌ಪಿ)
ಜಯರಾಜ್ ಮೃತದೇಹವನ್ನು ಮನೆಗೆ ಕರೆದುಕೊಂಡು ಬಂದಾಗ (ಕೃಪೆ: ಎಎಫ್‌ಪಿ)   

ತೂತ್ತುಕುಡಿ: ತಮಿಳುನಾಡಿನತೂತ್ತುಕುಡಿ ಜಿಲ್ಲೆಯ ಸತ್ತಾನ್‍ಕುಲಂಪೊಲೀಸ್ ಕಸ್ಟಡಿಯಲ್ಲಿದ್ದ ಜಯರಾಜನ್ ಮತ್ತು ಅವರ ಮಗ ಬೆನಿಕ್ಸ್‌ಗೆ ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಲಾಠಿಯಿಂದ ಹೊಡೆಯಲಾಗಿದೆ. ಅಲ್ಲಿರುವ ಮೇಜಿನ ಮೇಲೆ ಅವರ ರಕ್ತದ ಕಲೆಗಳಿತ್ತು ಎಂದು ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಸಾಕ್ಷ್ಯ ನುಡಿದಿದ್ದಾರೆ.

ಪ್ರಕರಣದ ಬಗ್ಗೆ ಮಹಿಳಾ ಹೆಡ್‌ಕಾನ್‌‌ಸ್ಟೆಬಲ್ ರೇವತಿ ಎಂಬವರ ಸಾಕ್ಷ್ಯ ಹೇಳಿಕೆಯನ್ನು ಆಧರಿಸಿ ಮದ್ರಾಸ್ ಹೈಕೋರ್ಟ್‌ನ ಮದುರೈ ನ್ಯಾಯಪೀಠಕ್ಕೆ ನಾಲ್ಕು ಪುಟಗಳ ವರದಿ ಸಲ್ಲಿಸಲಾಗಿದೆ. ಈ ವಿಷಯಗಳನ್ನು ಬಹಿರಂಗಪಡಿಸಿದರೆ ಕೊಲೆ ಬೆದರಿಕೆ ಬರಬಹುದು ಎಂದು ರೇವತಿಭಯಭೀತರಾಗಿದ್ದಾರೆಎಂದು ಕಸ್ಟಡಿ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಹೇಳಿದ್ದಾರೆ.

ಪಿ.ಜಯರಾಜ್ ಮತ್ತು ಬೆನಿಕ್ಸ್ ಅವರ ಕಸ್ಟಡಿ ಸಾವಿನ ಬಗ್ಗೆ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.ಅಪ್ಪ -ಮಗ ಕಸ್ಟಡಿ ಸಾವು ಪ್ರಕರಣದ ತನಿಖೆಯನ್ನು ಡಿಎಸ್‌ಪಿ ಅನಿಲ್ ಕುಮಾರ್ ನೇತೃತ್ವದ ಸಿಬಿ-ಸಿಐಡಿ ತಂಡ ನಡೆಸುತ್ತಿದೆ. ಸಾಕ್ಷ್ಯ ಹೇಳಿರುವ ರೇವತಿ ಮತ್ತು ಅವರ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ADVERTISEMENT

ಸತ್ತಾನ್‌ಕುಲಂ ಪೊಲೀಸ್ ಠಾಣೆಯಲ್ಲಿ ಇಡೀ ರಾತ್ರಿ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ.ಅಲ್ಲಿನ ಮೇಜು ಮತ್ತು ಲಾಠಿಯಲ್ಲಿ ರಕ್ತದ ಕಲೆಗಳಿವೆ. ಅದನ್ನು ಆದಷ್ಟು ಬೇಗ ಸಂಗ್ರಹಿಸಿ, ಇಲ್ಲವಾದರೆ ಪೊಲೀಸರು ಸಾಕ್ಷ್ಯ ಅಳಿಸಿಬಿಡುತ್ತಾರೆಎಂದು ರೇವತಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಮುಂದೆ ಹೇಳಿದ್ದಾರೆ.

ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲು ಹೋದಾಗ ಪೊಲೀಸರು ಲಾಠಿಯನ್ನು ನೀಡಲು ನಿರಾಕರಿಸಿದ್ದಾರೆ. ಅವರು ತನಿಖೆಗೆ ಸಹಕರಿಸದೇ ಇದ್ದಾಗ ಒತ್ತಾಯ ಮಾಡಬೇಕಾಗಿ ಬಂತು. ಒಬ್ಬ ಪೊಲೀಸ್ ಬಳಿ ಲಾಠಿ ಕೇಳಿದಾಗ ಆತ ಅಲ್ಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಎಂದು ಮೆಜಿಸ್ಟ್ರೇಟ್ ಹೇಳಿದ್ದಾರೆ.

ರೇವತಿ ಅವರಿಗೆ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ ನಂತರವೇ ಆಕೆ ಹೇಳಿಕೆಗೆ ಸಹಿ ಹಾಕಿದ್ದರು. ಅವರ ಹೇಳಿಕೆಯನ್ನು ಎಚ್ಚರಿಕೆಯಿಂದ ದಾಖಲಿಸಲಾಗಿದೆ.

ಜೂನ್ 28ರಂದು ನಾನು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ತನಿಖೆಗೆ ಸಹಕರಿಸಿಲ್ಲ. ಅವರಲ್ಲಿ ಒಬ್ಬ ಉಡಾಫೆಯಿಂದ ವರ್ತಿಸಿದ. ಕಾನ್‌ಸ್ಟೆಬಲ್ ಒಬ್ಬರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂದಿದ್ದಾರೆ ಮೆಜಿಸ್ಟ್ರೇಟ್.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಪಿ ಡಿ.ಕುಮಾರ್, ಡಿಎಸ್‌ಪಿ ಪ್ರತಾಪನ್ ಮತ್ತು ಕಾನ್‌ಸ್ಟೆಬಲ್ ಮಹಾರಾಜನ್ ಮಂಗಳವಾರ ಹೈಕೋರ್ಟ್‌ಗೆ ಹಾಜರಾಗಿದ್ದಾರೆ.ತಾನು ತೀವ್ರಮಾನಸಿಕ ಒತ್ತಡ ಅನುಭವಿಸುತ್ತಿದ್ದು ಹಾಗಾಗಿ ಮೆಜಿಸ್ಟ್ರೇಟ್ ಜತೆ ಆ ರೀತಿ ವರ್ತಿಸಿದೆ ಎಂದು ಕಾನ್‌ಸ್ಟೆಬಲ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಪೊಲೀಸ್ ಠಾಣೆಯ ಸಿಸಿಟಿವಿಯ ಹಾರ್ಡ್‌ಡಿಸ್ಕ್‌ನಲ್ಲಿ 1 ಟೆರಾಬೈಟ್‌ನಷ್ಟು ಜಾಗ ಇದ್ದರೂ ದಿನನಿತ್ಯದ ದೃಶ್ಯಗಳು ಅಳಿಸಿಹೋಗುವಂತೆ ಅದನ್ನು ಕಾನ್ಫಿಗರ್ ಮಾಡಲಾಗಿದೆ ಎಂದು ಮೆಜಿಸ್ಟ್ರೇಟ್ ಹೇಳಿದ್ದಾರೆ.

ಸತ್ತಾನ್‌ಕುಲಂ ಪೊಲೀಸ್ ಠಾಣೆಯಲ್ಲಿನ ಪೊಲೀಸರು ತನಿಖೆಯನ್ನು ಗಂಭೀರವಾಗಿ ತೆಗದುಕೊಂಡಿಲ್ಲ. ಅವರು ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಪೊಲೀಸ್ ಠಾಣೆಗೆ ಹೋಗಿ ತನಿಖೆ ನಡೆಸಿದಾಗ ಪೊಲೀಸರು ಧೈರ್ಯದಿಂದಲೇ ಬೆದರಿಕೆಯೊಡ್ಡಲು ಮುಂದಾಗಿದ್ದರು ಎಂದು ನ್ಯಾಯಮೂರ್ತಿ ಪಿ.ಎನ್. ಪ್ರಕಾಶ್ ಮತ್ತು ಬಿ.ಪುಗಲೇಂದಿ ಹೇಳಿದ್ದಾರೆ.

ರೇವತಿ ಅವರ ಹೇಳಿಕೆಯನ್ನ ಡಿಎಸ್‌ಪಿ ಅನಿಲ್ ಕಮಾರ್ ಅವರಿಗೆ ನೀಡಲಾಗುವುದು. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಮ್ಮ ಮೊಬೈಲ್ ಅಂಗಡಿಯ ವ್ಯವಹಾರ ಮಾಡಿದ್ದರು ಎಂಬ ಆರೋಪದಡಿಯಲ್ಲಿ ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್‌ನ್ನು ವಶಕ್ಕೆ ತೆಗೆದುಕೊಂಡಿದ್ದರು. ಇವರಿಬ್ಬರು ಜೂನ್ 23ರಂದು ಕೋವಿಲ್‌ಪಟ್ಟಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.ಸತ್ತಾನ್‌ಕುಲಂ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕ್ರೌರ್ಯದಿಂದ ಇವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಜಯರಾಜನ್ ಕುಟುಂಬ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.