ADVERTISEMENT

ಸಿಬಿಐ, ಕೇಂದ್ರ ಸಚಿವ ನಿತ್ಯಾನಂದಗೆ ತೇಜಸ್ವಿ ಬೆದರಿಕೆ: ಜೈಸ್ವಾಲ್‌

ಪಿಟಿಐ
Published 18 ಸೆಪ್ಟೆಂಬರ್ 2022, 12:35 IST
Last Updated 18 ಸೆಪ್ಟೆಂಬರ್ 2022, 12:35 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ: ‘ಬಿಹಾರ ಉಪ‍ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಸಿಬಿಐ ಅಧಿಕಾರಿಗಳು ಹಾಗೂಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಆರೋಪಿಸಿದ್ದಾರೆ.

ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (ಐಆರ್‌ಸಿಟಿಸಿ) ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿಗೆ ಜಾಮೀನು ಲಭಿಸಿತ್ತು. ಅವರ ಜಾಮೀನು ರದ್ದುಪಡಿಸುವಂತೆ ಸಿಬಿಐ ಅಧಿಕಾರಿಗಳು ಶನಿವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ದೆಹಲಿ ನ್ಯಾಯಾಲಯ ಈ ಸಂಬಂಧ ತೇಜಸ್ವಿಗೆ ನೋಟಿಸ್‌ ನೀಡಿತ್ತು. ಸೆಪ್ಟೆಂಬರ್‌ 28ರೊಳಗೆ ಪ್ರತಿಕ್ರಿಯೆ ನೀಡುವಂತೆಯೂ ಸೂಚಿಸಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಭಾನುವಾರ ಸುದ್ದಿಗೋಷ್ಠಿ ನಡೆಸಿರುವ ಜೈಸ್ವಾಲ್‌, ‘ಸರಿಯಾದ ಸಮಯದಲ್ಲೇ ಸಿಬಿಐ ಅಧಿಕಾರಿಗಳು, ತೇಜಸ್ವಿ ಅವರ ಜಾಮೀನು ರದ್ದುಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹೋದ ತಿಂಗಳು ಸುದ್ದಿಗೋಷ್ಠಿ ನಡೆಸಿದ್ದ ತೇಜಸ್ವಿ, ರಾಯ್‌ ಅವರನ್ನು ಉದ್ದೇಶಿಸಿ ‘ಥಂಡಾ ಕರ್‌ ದೇಂಗೆ’ (ತಣ್ಣಗೆ ಮಾಡಿ ಬಿಡ್ತೀವಿ) ಎಂದು ಹೇಳಿದ್ದರು. ಈ ಮಾತಿನ ಅರ್ಥ ಏನು ಎಂಬುದು ಬಿಹಾರದ ಜನರಿಗೆ ಚೆನ್ನಾಗಿಯೇ ಗೊತ್ತು. ಯಾದವ್‌ ಅವರು ಸಿಬಿಐ ಅಧಿಕಾರಿಗಳಿಗೂ ಬಹಿರಂಗ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ.

ADVERTISEMENT

‘ಬಿಜೆಪಿಯು ಉದ್ದೇಶಪೂರ್ವಕವಾಗಿಯೇ ತೇಜಸ್ವಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ’ ಎಂಬ ಆರೋಪವನ್ನು ಜೈಸ್ವಾಲ್‌ ತಳ್ಳಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.