ಅನುಪಮ್ ಖೇರ್, ಡಾ. ಮನಮೋಹನ ಸಿಂಗ್
ಮುಂಬೈ: ಅಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಬಾಲಿವುಡ್ ನಟ ಅನುಪಮ್ ಖೇರ್, ‘ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದರು. ಪ್ರಾಮಾಣಿಕ ಪ್ರಧಾನಿ ಹಾಗೂ ಅದ್ಭುತ ಅರ್ಥಶಾಸ್ತ್ರಜ್ಞ’ ಎಂದು ಬಣ್ಣಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನಟನ ಮಾತುಗಳಿಗೆ ಕಿಡಿಯಾಡಿದ್ದಾರೆ.
ದಿ ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್ (TheAccidentalPrimeMinister) ಚಿತ್ರದಲ್ಲಿ ಡಾ. ಸಿಂಗ್ ಪಾತ್ರಧಾರಿಯಾಗಿ ಅನುಪಮ್ ಖೇರ್ ನಟಿಸಿದ್ದರು. ಈ ಚಿತ್ರವು ಡಾ. ಸಿಂಗ್ ಅವರ ಆಡಳಿತಾವಧಿಯ ಕಥಾವಸ್ತುವನ್ನು ಹೊಂದಿತ್ತು. 2019ರಲ್ಲಿ ತೆರೆ ಕಂಡಿದ್ದ ಈ ಚಿತ್ರ ವಿವಾದ ಹಾಗೂ ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಜತೆಗೆ ಅನುಪಮ್ ಅವರ ಕುರಿತೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಇದೀಗ ಡಾ. ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಖೇರ್, ‘ದಿ ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಚಿತ್ರಕ್ಕಾಗಿ ಡಾ. ಸಿಂಗ್ ಅವರ ಕುರಿತು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಯನ ನಡೆಸಿದ್ದೆ. ಅಷ್ಟೂ ಸಮಯ ನನಗೆ ಅವರೊಂದಿಗೇ ಸಮಯ ಕಳೆದ ಅನುಭವವಾಯಿತು. ಅವರೊಬ್ಬ ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿದ್ದರು. ಅವರೊಬ್ಬ ಚಾಣಾಕ್ಷ ರಾಜಕಾರಣಿ ಅಲ್ಲ ಎಂದು ಕೆಲವರು ಹೇಳಬಹುದು. ಆದರೆ ಅವರು ಹೃದಯವಂತರಾಗಿದ್ದರು’ ಎಂದಿದ್ದಾರೆ.
‘ಯಾವುದೇ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವಾಗ ಪರಕಾಯ ಪ್ರವೇಶ ಅಗತ್ಯ. ಡಾ. ಸಿಂಗ್ ಅವರು ಜನ್ಮತಾ ಉತ್ತಮ ವ್ಯಕ್ತಿ. ಮೃದು, ಬುದ್ಧಿವಂತ ಹಾಗೂ ಹೃದಯವಂತರಾಗಿದ್ದರು. ಈ ಚಿತ್ರದಲ್ಲಿ ಡಾ. ಸಿಂಗ್ ಆಗಿ ನಟಿಸುವ ಅವಕಾಶ ಬಂದಾಗ, ಮೊದಲಿಗೆ ನಾನು ಒಲ್ಲೆ ಎಂದಿದ್ದೆ. ಅದಕ್ಕೆ ರಾಜಕೀಯವನ್ನೂ ಒಳಗೊಂಡು ಕಾರಣಗಳು ಹಲವಾರು ಇದ್ದವು. ಅವರನ್ನು ಅಪಹಾಸ್ಯ ಮಾಡುವ ಸಲುವಾಗಿಯೇ ಈ ಪಾತ್ರ ನಿರ್ವಹಿಸಿದೆ ಎಂದೂ ಜನರು ಹೇಳಬಹುದು ಎಂಬ ನಂಬಿಕೆ ನನ್ನದಾಗಿತ್ತು. ಅಂತಿಮವಾಗಿ ಅಭಿನಯಿಸಲು ಒಪ್ಪಿದೆ. ಆ ಚಿತ್ರವನ್ನು ನೋಡಿದ್ದರೆ, ಅದರಲ್ಲಿ ಡಾ. ಸಿಂಗ್ ಅವರ ಮೇಧಾಶಕ್ತಿ, ಕರುಣೆ ಹಾಗೂ ಮಾನವೀಯತೆಯನ್ನು ನೀವು ಕಾಣಬಹುದು’ ಎಂದು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
‘ಆ ಚಿತ್ರಕ್ಕೆ ನ್ಯಾಯ ಒದಗಿಸಿದ ಸಂತೃಪ್ತಿ ನನ್ನದು. ಚಿತ್ರದ ವಿಷಯ ವಿವಾದಾತ್ಮಕವಾಗಿರಬಹುದು. ಆದರೆ ಆ ವ್ಯಕ್ತಿ ಅಲ್ಲ. ಈ ಚಿತ್ರವನ್ನು ಹೊರತುಪಡಿಸಿ, ಹಲವು ಬಾರಿ ಡಾ. ಸಿಂಗ್ ಅವರನ್ನು ಭೇಟಿ ಮಾಡುವ ಅವಕಾಶ ಲಭಿಸಿತ್ತು. ನನ್ನ ಸಿನಿಮಾ ಕೆಲಸವನ್ನು ಅವರು ಮುಕ್ತಕಂಠದಿಂದ ಹೊಗಳುತ್ತಿದ್ದರು. ನೀಲಿ ಪಗಡಿ ತೊಡುತ್ತಿದ್ದ ಆ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಈ ದೇಶವು ಒಬ್ಬ ಅದ್ಭುತ ನಾಯಕ ಹಾಗೂ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡಿದೆ’ ಎಂದು ನಟ ಅನುಪಮ್ ಹೇಳಿದ್ದಾರೆ.
ಅನುಪಮ್ ಖೇರ್ ಅವರ ಈ ವಿಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಾ. ಸಿಂಗ್ ಅವರ ಪಾತ್ರಧಾರಿಯಾಗಿ ಅಪಾರ್ಥ ಸೃಷ್ಟಿಸುವಂತೆ ನಟಿಸುವ ಮೂಲಕ ಮಾಜಿ ಪ್ರಧಾನಿಗೆ ಅಗೌರವ ತೋರಿದ್ದೀರಿ. ರಾಜಕೀಯ ಪ್ರೇರಿತವಾದ ಈ ಸಿನಿಮಾದಲ್ಲಿ ಮನಮೋಹನ ಸಿಂಗ್ ಅವರನ್ನು ತಪ್ಪಾಗಿ ತೋರಿಸಲಾಗಿದ್ದು, ಅದನ್ನು ರಾಜಕೀಯ ಷಡ್ಯಂತರಕ್ಕೆ ಬಳಸಿಕೊಳ್ಳಲಾಯಿತು’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪುಸ್ತಕದಲ್ಲಿ ಇಲ್ಲದ ವಿಷಯಗಳನ್ನು ಚಿತ್ರದಲ್ಲಿ ತೋರಿಸಿರುವ ನೀವು, ಅವರೊಬ್ಬ ದುರ್ಬಲ ಪ್ರಧಾನಿಯಾಗಿದ್ದರು ಎಂಬುದನ್ನು ಹೇಳಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಮನಮೋಹನ ಸಿಂಗ್ ಅವರನ್ನು ಅವಮಾನಿಸುವ ಸಲುವಾಗಿಯೇ ಈ ಚಿತ್ರವನ್ನು ಸಿದ್ಧಪಡಿಸಲಾಗಿತ್ತು ಎಂಬುದು ಜಗಜ್ಜಾಹೀರಾಗಿದೆ’ ಎಂದು ಮತ್ತೊಬ್ಬರು ಜರಿದಿದ್ದಾರೆ.
‘ಆ ಚಿತ್ರವನ್ನು ನೆನಪಿಸಿಕೊಳ್ಳುವ ಮೂಲಕ ಡಾ. ಸಿಂಗ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಈಗ ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತಿರುವುದು ನಿಜಕ್ಕೂ ಸರಿಯಾದ ಮಾರ್ಗವಲ್ಲ’ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೆ ತರುವ ಮೂಲಕ ನವ ಭಾರತದ ನಿರ್ಮಾಣಕ್ಕೆ ಡಾ. ಮನಮೋಹನ ಸಿಂಗ್ ಅವರ ಕೊಡುಗೆ ಅಪಾರ. 92 ವರ್ಷದ ಡಾ. ಸಿಂಗ್ ಅವರು ಗುರುವಾರ ರಾತ್ರಿ ದೆಹಲಿ ಏಮ್ಸ್ನಲ್ಲಿ ನಿಧನರಾದರು. ಅಗಲಿದ ಮಾಜಿ ಪ್ರಧಾನಿ ಅವರ ಪಾರ್ಥೀವ ಶರೀರವನ್ನು ಎಐಸಿಸಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಶನಿವಾರ ಇಡಲಾಗುತ್ತದೆ. ಬೆಳಿಗ್ಗೆ 11.45ಕ್ಕೆ ನಿಗಮ್ಬೋಧ್ ಘಾಟ್ನಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.