ADVERTISEMENT

2026ರ ಫೆಬ್ರುವರಿ 21: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 14:02 IST
Last Updated 21 ಫೆಬ್ರುವರಿ 2026, 14:02 IST
   

ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಫೆ. 26ಕ್ಕೆ ಡಿಸಿಎಂಗೆ ಹೈಕಮಾಂಡ್ ಬುಲಾವ್ ಕೊಟ್ಟಿದೆ: ಶಾಸಕ ಇಕ್ಬಾಲ್ ಹುಸೇನ್

‘ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಫೆ. 26ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಬರಲು ಸೂಚನೆ ನೀಡಿದೆ. ಅಂದು ನಮ್ಮ ನಾಯಕನಿಗೆ ಒಳ್ಳೆಯದಾಗಲಿದೆ’ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲ, ದೇಶದಿಂದಲೇ ಹೊರಹಾಕುತ್ತೇವೆ: ಶಾ

ಭಾರತವು ನಕ್ಸಲರಿಂದ ಮುಕ್ತವಾಗಲು ಸಾಧ್ಯವಾದರೆ, ನುಸುಳುಕೋರರಿಂದಲೂ ಮುಕ್ತವಾಗಲು ಸಾಧ್ಯ ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲದೆ ದೇಶದಿಂದಲೇ ಹೊರಹಾಕುತ್ತೇವೆ ಎಂದು ಶನಿವಾರ ಹೇಳಿದ್ದಾರೆ.

ADVERTISEMENT

ಮೇ ಅಂತ್ಯದೊಳಗೆ ಪಾಲಿಕೆಗಳಿಗೆ ಚುನಾವಣೆ: ಡಿಕೆಶಿ

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಮೇ ತಿಂಗಳೊಳಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರಣರಂಗ ಬಿಟ್ಟು ಓಡುವ ಹೇಡಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಉಸಿರು ಇರುವವರೆಗೆ ರಾಜಕೀಯ ಷಡ್ಯಂತ್ರ, ದ್ವೇಷ–ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ಆಗಲಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತದಿಂದ ಆಮದಾಗುವ ಗೋಮಾಂಸ ಸೇರಿ ಈ ಉತ್ಪನ್ನಗಳಿಗೆ ಅಮೆರಿಕದಲ್ಲಿ ಸುಂಕ ವಿನಾಯಿತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ದೇಶಗಳ ಆಮದು ಸರಕುಗಳ ಮೇಲೆ ಹೇರಿದ್ದ ವ್ಯಾಪಕ ಸುಂಕಗಳನ್ನು ರದ್ದು ಮಾಡಿ ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ, ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಎಲ್ಲ ದೇಶಗಳ ಮೇಲೆ ಶೇ 10 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಲ್ಲದೇ, ಸದ್ಯ ವಿವಿಧ ದೇಶಗಳ ಮೇಲೆ ಅಸ್ತಿತ್ವದಲ್ಲಿರುವ ಸುಂಕಗಳನ್ನು ರದ್ದುಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.

ದೆಹಲಿಯಲ್ಲಿ ಉಗ್ರರ ದಾಳಿ ಭೀತಿ: ಕೆಂಪುಕೋಟೆ, ಧಾರ್ಮಿಕ ಕೇಂದ್ರಗಳಲ್ಲಿ ಹೈ ಅಲರ್ಟ್‌

ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಚಾಂದನಿ ಚೌಕ್‌ನ ಕೆಲವು ಭಾಗಗಳು ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಎನ್‌ಐ' ವರದಿ ಮಾಡಿದೆ.

ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ

ಗದಗ: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸೂಫಿ ಶೈನ್‌ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್: 40ನೇ ವರ್ಷಕ್ಕೆ 2ನೇ ಮದುವೆ

ಟೀಂ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಶಿಖರ್ ಧವನ್ ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯ ಜೀವನದಲ್ಲೂ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದಾರೆ.

ರಶ್ಮಿಕಾ, ವಿಜಯ್ ಮದುವೆಗೆ ಹೋಗುವ ಅತಿಥಿಗಳಿಗಿವೆ ನಿಯಮಗಳು

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ಫೆಬ್ರುವರಿ 26ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಇಬ್ಬರದ್ದು ಎನ್ನುವ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಜೋಡಿಯ ಮದುವೆಗೆ ಹೋಗುವ ಅತಿಥಿಗಳಿಗೆ ಕೆಲವೊಂದು ನಿಯಮಗಳನ್ನು ಹಾಕಿದ್ದಾರಂತೆ.

ರಾಯ Vs ಟಿಕೆಟ್: ಟಾಕ್ಸಿಕ್‌ನಲ್ಲಿ ಈ ಇಬ್ಬರ ಮಧ್ಯೆ ನಡೆಯಲಿದ್ಯಾ ಜಿದ್ದಾಜಿದ್ದಿ?

ನಟ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ ಟೀಸರ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಒಂದು ಕಡೆ ರಾಯ, ಮತ್ತೊಂದು ಕಡೆ ಟಿಕೆಟ್‌ನಾ ಘರ್ಜನೆ ಜೋರಾಗಿದೆ. ನಿನ್ನೆ (ಫೆ.20) ಬಿಡುಗಡೆಯಾದ ಟೀಸರ್‌ನಲ್ಲಿ ಈ ಇಬ್ಬರ ಅಬ್ಬರ ಹೇಳತೀರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.