ADVERTISEMENT

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗಿದ್ದ ಗುಪ್ತ ಸುರಂಗ ಮಾರ್ಗ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2021, 4:46 IST
Last Updated 3 ಸೆಪ್ಟೆಂಬರ್ 2021, 4:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗವನ್ನು ಪತ್ತೆ ಹಚ್ಚಲಾಗಿದೆ. ಇದು ತೀವ್ರ ಕುತೂಹಲವನ್ನು ಕೆರಳಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸುರಂಗ ಮಾರ್ಗವನ್ನು ಬಳಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್, 'ಸುರಂಗ ಮಾರ್ಗವು ವಿಧಾನಸಭೆಯಿಂದ ಕೆಂಪು ಕೋಟೆಯನ್ನು ಸಂಪರ್ಕಿಸುತ್ತದೆ. ಬ್ರಿಟಿಷರು ಇದನ್ನು ಬಳಕೆ ಮಾಡುತ್ತಿದ್ದರು' ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

'1993ರಲ್ಲಿ ನಾನು ಶಾಸಕನಾದಾಗ ಕೆಂಪುಕೋಟೆಯ ವರೆಗಿನ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದೆ. ಆದರೆ ಅದರ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಈಗ ಸುರಂಗದ ಎದುರಿನ ಭಾಗ ಪತ್ತೆಯಾಗಿದೆ. ಆದರೆ ಮೆಟ್ರೊ ಯೋಜನೆ ಹಾಗೂ ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗ ಮಾರ್ಗವು ನಾಶವಾಗಿದೆ. ಹಾಗಾಗಿ ಮತ್ತಷ್ಟು ಅಗೆಯುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

'1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ ನಂತರ ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿದ್ದ ದೆಹಲಿ ಶಾಸಕಾಂಗ ಸಭೆಯನ್ನು 1926ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಯಿತು. ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸುತ್ತಿದ್ದರು' ಎಂದು ಗೋಯೆಲ್ ಮಾಹಿತಿ ನೀಡಿದರು.

'ಇಲ್ಲಿ ಗಲ್ಲುಶಿಕ್ಷೆ ಕೋಣೆಯ ಉಪಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆದರೆ ಎಂದಿಗೂ ಅದನ್ನು ತೆರೆಯಲಿಲ್ಲ. ಈಗ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಕೊಠಡಿ ತೆರೆದು ಪರಿಶೀಲಿಸಲು ನಿರ್ಧರಿಸಿದ್ದೆ. ಈ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರಿಗೆ ಗೌರವ ಸೂಚಕ ಕೇಂದ್ರವಾಗಿ ಬದಲಾಯಿಸಲು ಬಯಸುತ್ತೇವೆ' ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಈ ಸ್ಥಳವು ಅತ್ಯಂತ ಮಹತ್ವದ ಇತಿಹಾಸವನ್ನು ಹೊಂದಿದೆ. ಅಲ್ಲದೆ ಮುಂದಿನ ಸ್ವಾತಂತ್ರ್ಯೋತ್ಸವದ ವೇಳೆಗೆ ಕೊಠಡಿಯನ್ನು ಪ್ರವಾಸಿಗಳಿಗಾಗಿ ತೆರೆದುಕೊಳ್ಳಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.