
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ
-ಪಿಟಿಐ ಚಿತ್ರ
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಮುಂಚಿತವಾಗಿ ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಬುಧವಾರ ಮೈತ್ರಿ ಘೋಷಿಸಿವೆ. ಬಿಎಂಸಿಗೆ ಜನವರಿ 15ಕ್ಕೆ ಚುನಾವಣೆ ನಿಗದಿಯಾಗಿದೆ.
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಘೋಷಣೆ ಮಾಡಿದರು.
‘ಎರಡೂ ಪಕ್ಷಗಳು ಒಟ್ಟಿಗೆ ಇರಲು ಒಗ್ಗೂಡಿವೆ, ಮರಾಠಿ ಜನರು ಮತ್ತು ಮಹಾರಾಷ್ಟ್ರಕ್ಕಾಗಿ ನಾವು ಒಂದಾಗಿದ್ದೇವೆ’ ಎಂದು ಸೋದರ ಸಂಬಂಧಿಗಳು ಹೇಳಿದರು.
‘ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಸಮಾಜ ಸುಧಾರಕ, ಬರಹಗಾರರಾದ ನನ್ನ ಅಜ್ಜ ಪ್ರಬೋಧಂಕರ್ ಠಾಕ್ರೆ ಮಹತ್ವದ ಪಾತ್ರವಹಿಸಿದ್ದರು. ನನ್ನ ತಂದೆ ಬಾಳಾಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್ (ರಾಜ್ ಠಾಕ್ರೆ ತಂದೆ) ಅವರೂ ಮುಂಬೈ ಅನ್ನು ಮಹಾರಾಷ್ಟ್ರದ ಭಾಗವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು’ ಎಂದು ಉದ್ಧವ್ ಸ್ಮರಿಸಿದರು.
‘ಮುಂಬೈನ ಮೇಯರ್ ಮರಾಠಿ ಜನರಾಗಿರುತ್ತಾರೆ ಮತ್ತು ನಮ್ಮವರಾಗಿರುತ್ತಾರೆ’ ಎಂದು ರಾಜ್ ಠಾಕ್ರೆ ಹೇಳಿದರು.
ನಾಸಿಕ್ ಮತ್ತು ಮುಂಬೈ ಸೇರಿ 27 ಮುನ್ಸಿಪಲ್ ಕಾರ್ಪೊರೇಷನ್ಗಳಿಗೆ ಜನವರಿ 15ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದ್ದು, ಕೆಲವೆಡೆ ಮಾತುಕತೆ ನಡೆದಿವೆ ಎಂದು ಉದ್ಧವ್ ಹೇಳಿದರು.
ಜಂಟಿ ಪತ್ರಿಕಾಗೋಷ್ಠಿ 16 ನಿಮಿಷಗಳಲ್ಲಿ ಕೊನೆಗೊಂಡಿತು. ಆದರೆ ಬಿಎಂಸಿಯ 227 ವಾರ್ಡ್ಗಳ ಸೀಟು– ಹಂಚಿಕೆ ಕುರಿತು ಯಾವುದೇ ಸ್ಪಷ್ಟ ಮಾಹಿತಿ ದೊರೆಯಲಿಲ್ಲ. ಕೆಲ ವಾರ್ಡ್ಗಳಿಗೆ ಸಂಬಂಧಿಸಿದಂತೆ ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಉದ್ಧವ್ ಅವರ ಪತ್ನಿ ರಶ್ಮಿ, ಪುತ್ರ ಆದಿತ್ಯ ಹಾಗೂ ರಾಜ್ ಅವರ ಪತ್ನಿ ಶರ್ಮಿಳಾ, ಪುತ್ರ ಅಮಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.