ಶರದ್ ಪವಾರ್, ಏಕನಾಥ ಶಿಂದೆ, ಉದ್ಧವ್ ಠಾಕ್ರೆ
–ಪಿಟಿಐ ಚಿತ್ರಗಳು
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅಭಿನಂದಿಸಿದ ಬಗ್ಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ವಿರೋಧ ಪಕ್ಷಗಳ ಬಣವಾಗಿರುವ ಮಹಾ ವಿಕಾಸ್ ಅಘಾಡಿಯು (ಎಂವಿಎ) ಕೇಂದ್ರದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದೆ. ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಎನ್ಸಿಪಿ (ಎಸ್ಪಿ) ಗುರುತಿಸಿಕೊಂಡಿವೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಶರದ್ ಪವಾರ್ ಅವರು 98ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪುಣೆ ಮೂಲದ ಸರ್ಹಾದ್ ಅವರು ಸ್ಥಾಪಿಸಿದ ‘ಮಹದ್ಜಿ ಶಿಂದೆ ರಾಷ್ಟ್ರೀಯ ಗೌರವ ಪ್ರಶಸ್ತಿ’ಯನ್ನು ಡಿಸಿಎಂ ಏಕನಾಥ ಶಿಂದೆ ಅವರಿಗೆ ಪ್ರದಾನ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಮುರಳೀಧರ್ ಮೊಹೋಲ್ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
‘ಶರದ್ ಪವಾರ್ ಸಾಹೇಬ್ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಬಾರದಿತ್ತು. ಮಹಾರಾಷ್ಟ್ರ ಇದನ್ನು ಇಷ್ಟಪಡುವುದಿಲ್ಲ’ ಎಂದು ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.
ಇದು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವಾಗಿರಲಿಲ್ಲ. ಬದಲಾಗಿ ರಾಜಕೀಯ ಸಮಾರಂಭವಾಗಿತ್ತು ಎಂದೂ ರಾವುತ್ ಕಿಡಿಕಾರಿದ್ದಾರೆ.
ಏತನ್ಮಧ್ಯೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಎನ್ಸಿಪಿ ಎಂಎಲ್ಸಿ ಅಮೋಲ್ ಮಿಟ್ಕರಿ ಅವರು ಪ್ರಶಸ್ತಿ ಸ್ವೀಕರಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.