ADVERTISEMENT

ಉತ್ತರ ಪ್ರದೇಶ | ಸಿಗದ ಚಿಕಿತ್ಸೆ: ಐದು ವರ್ಷದ ಬಾಲಕಿ ಸಾವು

₹20 ಸಾವಿರ ಪಾವತಿಸುವಂತೆ ಸೂಚಿಸಿದ್ದ ಖಾಸಗಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 14:27 IST
Last Updated 25 ಜೂನ್ 2025, 14:27 IST
.
.   

ಹಾಪುರ (ಉತ್ತರ ಪ್ರದೇಶ): ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರಿಂದಲೇ ತಮ್ಮ ಐದು ವರ್ಷದ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಇಲ್ಲಿನ ಖಾಸಗಿ ಆಸ್ಪತ್ರೆಯ ವಿರುದ್ಧ ದೂರಿದ್ದಾರೆ.

ಪಿಲ್ಖುವಾದ ರಾಷ್ಟ್ರೀಯ ಹೆದ್ದಾರಿ 9ರಲ್ಲಿರುವ ಸರಸ್ವತಿ ಆಸ್ಪತ್ರೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅನ್ವರ್‌– ಮೌಸಾಮಿ ಅವರು ತಮ್ಮ ಮಗಳು ಅಮ್ರೀನ್‌ ಅವರನ್ನು ಜೂನ್‌ 20ರಂದು ಆಸ್ಪತ್ರೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ.

ಆಸ್ಪತ್ರೆಯ ವೈದ್ಯರು ಚಿಕಿತ್ಸೆಯ ವೆಚ್ಚ ₹20 ಸಾವಿರ ಪಾವತಿಸುವಂತೆ ಸೂಚಿಸಿದ್ದಾರೆ. ದಂಪತಿ ತಮ್ಮ ಬಳಿ ಹಣವಿಲ್ಲ ಎನ್ನುತ್ತಿದ್ದಂತೆ, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಚಿಕಿತ್ಸೆ ನೀಡಲು ವಿಳಂಬವಾಗಿದ್ದರಿಂದಲೇ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ದೂರಿದ್ದಾರೆ.

ADVERTISEMENT

ಪೋಷಕರ ಆರೋಪದ ಕುರಿತಂತೆ ಖಾಸಗಿ ಆಸ್ಪತ್ರೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಷಯ ತಿಳಿದ ಹಾಪುರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸುನೀಲ್‌ ತ್ಯಾಗಿ ಅವರು ಆಸ್ಪತ್ರೆಯ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಿದ್ದು, ತನಿಖೆಗೂ ಆದೇಶಿಸಿದ್ದಾರೆ.

‘ಆಸ್ಪತ್ರೆಯ ನಡೆ ಅಮಾನವೀಯ’ ಎಂದಿರುವ ಬಿಜೆಪಿಯ ನಾಯಕ ಮೊಹಮ್ಮದ್‌ ಡ್ಯಾನಿಶ್‌, ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.