ಜಗದೀಪ್ ಧನಕರ್
(ಪಿಟಿಐ ಚಿತ್ರ)
ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮೌನಕ್ಕೆ ಜಾರಿದ್ದು, ಅವರ ಮಾತಿಗಾಗಿ ಇಡೀ ದೇಶ ಕಾಯುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ತಿಳಿಸಿದೆ.
ಧನಕರ್ ರಾಜೀನಾಮೆ ನೀಡಿದಾಗಿನಿಂದಲೂ ಅಸಾಮಾನ್ಯ ಮೌನ ಕಾಯ್ದುಕೊಂಡಿದ್ದಾರೆ. ಇಂದು (ಮಂಗಳವಾರ) ಉಪರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಈ ನಡುವೆ ಧನಕರ್ ಮಾತಿಗಾಗಿ ಇಡೀ ದೇಶದ ಜನರು ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
'ಮೋದಿ ಸರ್ಕಾರದಿಂದ ರೈತರ ತೀವ್ರ ನಿರ್ಲಕ್ಷ್ಯ, ಅಧಿಕಾರದಲ್ಲಿರುವವರ 'ಅಹಂಕಾರ'ದಿಂದ ಉಂಟಾಗುವ ಅಪಾಯಗಳ ಬಗ್ಗೆ ಧನಕರ್ ಕಳವಳ ವ್ಯಕ್ತಪಡಿಸಿ ಉಪರಾಷ್ಟ್ರಪತಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು' ಎಂದು ಜೈರಾಮ್ ಆರೋಪಿಸಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21ರಂದು ದಿಢೀರ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯುತ್ತಿದೆ. ಎನ್ಡಿಎ ಮೈತ್ರಿಕೂಟದ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, 1962ರಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳ ಹೋಲಿಕೆಯಲ್ಲಿ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆ ಹೆಚ್ಚು.
ಎರಡೂ ಮೈತ್ರಿಕೂಟಗಳು ಸಭೆಗಳನ್ನು ನಡೆಸಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಒಗ್ಗಟ್ಟು ಪ್ರದರ್ಶಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.