ADVERTISEMENT

ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕು: ಉಪರಾಷ್ಟ್ರಪತಿ

ಪಿಟಿಐ
Published 1 ಮೇ 2022, 10:49 IST
Last Updated 1 ಮೇ 2022, 10:49 IST
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು   

ನವದೆಹಲಿ:ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ದೊರೆಯಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭಾನುವಾರ ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ನಾಯ್ಡು ಅವರು, ಭಾರತೀಯ ಶಿಕ್ಷಣ ವ್ಯವಸ್ಥೆಯು 'ನಮ್ಮ ಸಂಸ್ಕೃತಿ' ಮೇಲೆಯೇ ಕೇಂದ್ರೀಕೃತವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.

'ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಿದರೆ, ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲರು. ಒಂದುವೇಳೆ ಬೇರೆ ಭಾಷೆಯಲ್ಲಿ ನೀಡುವುದಾದರೆ, ಮೊದಲು ಅವರು (ಮಕ್ಕಳು) ಆ ಭಾಷೆಯನ್ನೇ ಕಲಿಯಬೇಕಾಗುತ್ತದೆ. ನಂತರವಷ್ಟೇ ವಿಷಯ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

'ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯಲ್ಲಿ ಪ್ರೌಢಿಮೆ ಹೊಂದಿರಬೇಕು. ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕು' ಎಂದೂ ಹೇಳಿದ್ದಾರೆ.

ಕಾನೂನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗದಿದ್ದರೆ ನ್ಯಾಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದರು. ಇದನ್ನು ಉಲ್ಲೇಖಿಸಿದ ನಾಯ್ಡು ಅವರು, 'ಪ್ರಧಾನಿ ಮೋದಿ ಅವರು, ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವುದರ ಅಗತ್ಯತೆಯ ಬಗ್ಗೆ ನಿನ್ನೆ (ಏ.30) ಮಾತನಾಡಿದ್ದಾರೆ. ನ್ಯಾಯಾಲಯಗಳಷ್ಟೇ ಏಕೆ, ಇದು ಎಲ್ಲೆಡೆ ಜಾರಿಯಾಗಬೇಕು' ಎಂದು ಒತ್ತಿಹೇಳಿದ್ದಾರೆ.

ವಿವಿಯ ಕುಲಪತಿಯೂ ಆಗಿರುವ ವೆಂಕಯ್ಯನಾಯ್ಡು ಅವರು ಮುಖ್ಯ ಅತಿಥಿಗಳಾಗಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿವಿಯ ಶತಮಾನೋತ್ಸವದ ಸ್ಮರಣಾರ್ಥ ನೂರು ರೂಪಾಯಿ ನಾಣ್ಯ, ಅಂಚೆಚೀಟಿ ಹಾಗೂ ಶತಮಾನೋತ್ಸವ ಸಂಪುಟ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.