ADVERTISEMENT

ಟಿಎಂಸಿ ಉಪಾಧ್ಯಕ್ಷರಾಗಿ ಯಶವಂತ ಸಿನ್ಹಾ ನೇಮಕ

ಏಜೆನ್ಸೀಸ್
Published 15 ಮಾರ್ಚ್ 2021, 6:48 IST
Last Updated 15 ಮಾರ್ಚ್ 2021, 6:48 IST
ಹಿರಿಯ ರಾಜಕಾರಣಿ ಯಶವಂತ ಸಿನ್ಹಾ
ಹಿರಿಯ ರಾಜಕಾರಣಿ ಯಶವಂತ ಸಿನ್ಹಾ   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಸೋಮವಾರ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಟಿಎಂಸಿ ಸೇರಿದ ಎರಡು ದಿನಗಳೊಳಗೆ ಈ ಮಹತ್ವದ ನಿರ್ಧಾರ ಹೊರಬಂದಿದೆ. ಯಶವಂತ್ ಸಿನ್ಹಾ ಅವರಿಗೆ ಟಿಎಂಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ ನೀಡಲಾಗಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ, ಶನಿವಾರದಂದು ಟಿಎಂಸಿ ಪಕ್ಷವನ್ನು ಸೇರಿದ್ದರು.

ADVERTISEMENT

ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಅಪರಿಚಿತರ ದಾಳಿಯ ಘಟನೆಯು ತಮ್ಮನ್ನು ಮತ್ತೆ ರಾಜಕೀಯಕ್ಕೆ ಮರಳಲು ಪ್ರೇರೇಪಿಸಿತ್ತು ಎಂದು ಹೇಳಿದ್ದರು.

83 ವರ್ಷದ ಯಶವಂತ ಸಿನ್ಹಾ 2018ರಲ್ಲಿ ಬಿಜೆಪಿ ಪಕ್ಷವನ್ನು ತೊರೆದಿದ್ದರು. ಅಲ್ಲದೆ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಟೀಕಿಸಿದ್ದರು.

ಮಾರ್ಚ್ 10ರಂದು ನಂದಿಗ್ರಾಮದಲ್ಲಿ ಚುನಾವಣೆ ಅಭಿಯಾನದ ವೇಳೆ ಅಪರಿಚಿತರು ತಳ್ಳಿದ ಪರಿಣಾಮ ಮಮತಾ ಬ್ಯಾನರ್ಜಿ ಎಡಗಾಲಿಗೆ ನೋವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಬಳಿಕ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ ಮಮತಾ ಮೇಲಿನ ದಾಳಿಯ ಆರೋಪವನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.

ಅತ್ತ ಮಮತಾ ಬ್ಯಾನರ್ಜಿ ಭಾನುವಾರದಂದು ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.