
ಜಮ್ಮುಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ
(ಪಿಟಿಐ ಚಿತ್ರ)
ಶ್ರೀನಗರ: ಫರೀದಾಬಾದ್ನ ಅಲ್ ಫಲಾಹ್ ವಿಶ್ವವಿದ್ಯಾಲಯ ಸಮೀಪದ ತನ್ನ ಬಾಡಿಗೆ ಮನೆಯಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡಲು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಯಾಣದ ಮೌಲ್ವಿಯೊಬ್ಬನನ್ನು ವಶಕ್ಕೆ ಪಡೆದು ಶ್ರೀನಗರಕ್ಕೆ ಕರೆದೊಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ತಿಳಿಸಿದರು.
‘ಮೇವಾತ್ನ ಮೌಲ್ವಿ ಇಶ್ತಿಯಾಕ್ ಅಲ್ ಫಲಾಹ್ ಕ್ಯಾಂಪಸ್ನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಈತನ ಬಾಡಿಗೆ ಮನೆಯಲ್ಲಿ 2,500 ಕೆ.ಜಿ ಅಮೋನಿಯಂ ನೈಟ್ರೇಟ್, ಪೊಟಾಷಿಯಂ ಕ್ಲೋರೆಟ್ ಮತ್ತು ಸಲ್ಫರ್ ಪತ್ತೆಯಾಗಿದೆ’ ಎಂದು ಹೇಳಿದರು.
ಸ್ಫೋಟಕಗಳನ್ನು ಡಾ.ಮುಜಮ್ಮಿಲ್ ಅಲಿಯಾಸ್ ಮುಸೈಬ್ ಮತ್ತು ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ಓಡಿಸುತ್ತಿದ್ದ ಡಾ.ಉಮರ್ ನಬಿ ಸಂಗ್ರಹಿಟ್ಟಿದ್ದರು.
ಮೌಲ್ವಿ ಇಶ್ತಿಯಾಕ್ನನ್ನು ಬಂಧಿಸುವ ಸಾಧ್ಯತೆ ಇದೆ.
ಕಾರು ಸ್ಫೋಟ ಪ್ರಕರಣದ ಬೆನ್ನುಬಿದ್ದಿರುವ ಪೊಲೀಸರು ನಿಷೇಧಿತ ಜಮಾತ್–ಎ–ಇಸ್ಲಾಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದರು. ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಆಧಾರದಲ್ಲಿ ಕುಲ್ಗಾಂ ಪುಲ್ವಾಮಾ ಶೋಪಿಯಾನ್ ಬಾರಾಮುಲ್ಲಾ ಗಾಂಧೇರಬಲ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಶೋಧದ ವೇಳೆ ಡಿಜಿಟಲ್ ಸಾಧನಗಳು ದಾಖಲೆಗಳು ಮುದ್ರಿತ ಕಾಗದಗಳನ್ನು ವಶಕ್ಕೆ ಪಡೆಯಲಾಗಿದೆ. ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು. ಸಿ.ಸಿ.ಟಿ.ವಿ ಅಳವಡಿಸಲು ಸಲಹೆ (ಜಮ್ಮು ವರದಿ): ಪೊಲೀಸರು ಬುಧವಾರ ನಗರದ ಹಲವು ಸ್ಥಳಗಳಿಗೆ ತೆರಳಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರು. ಭದ್ರತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೊಳ್ಳುವಂತೆ ಅಂಗಡಿಗಳ ಮಾಲೀಕರು ಮತ್ತು ಜನರಿಗೆ ಹೇಳಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆ ಸಮೀಪದ ಕಾರು ಸ್ಫೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಬುಧವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ‘ಭೂತಾನ್ನಿಂದ ಮರಳಿದ ಪ್ರಧಾನಿ ಅವರು ನೇರವಾಗಿ ಎಲ್ಎನ್ಜೆಪಿ ಆಸ್ಪತ್ರೆಗೆ ತೆರಳಿದರು’ ಎಂದು ಅಧಿಕಾರಿಗಳು ತಿಳಿಸಿದರು. ಗಾಯಾಳುಗಳೊಂದಿಗೆ ಮಾತನಾಡಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದರು. ಆಸ್ಪತ್ರೆಯ ವೈದ್ಯರು ಅಧಿಕಾರಿಗಳೊಂದಿಗೂ ಸಂವಾದ ನಡೆಸಿದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.