ಕೋಲ್ಕತ್ತ:ಭಾರತವನ್ನುಪಾಕಿಸ್ತಾನ ಅಥವಾ ತಾಲಿಬಾನ್ ಆಗಿ ಪರಿವರ್ತಿಸಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯಿಸಿದರೆ ಭವಾನಿಪುರ ಕ್ಷೇತ್ರವು ಪಾಕಿಸ್ತಾನ ಆಗಲಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿರುವ ಮಮತಾ, ಬಿಜೆಪಿಯು ವಿಭಜಿಸಿ ಆಳುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
'ಬಿಜೆಪಿಯ ನೀತಿ ಹಾಗೂ ರಾಜಕೀಯವನ್ನು ನಾನು ಇಷ್ಟಪಡುವುದಿಲ್ಲ. ಅವರು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ರಾಜಕೀಯವನ್ನು ಮಾಡುತ್ತಾರೆ. ನಂದಿಗ್ರಾಮದಲ್ಲೂ ಟಿಎಂಸಿ ಗೆದ್ದರೆ ಪಾಕಿಸ್ತಾನ ಆಗಲಿದೆ ಎಂದಿದ್ದರು. ಭವಾನಿಪುರದಲ್ಲೂ ಅದನ್ನೇ ಹೇಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಚುನಾವಣಾ ಪ್ರಚಾರದಲ್ಲಿ ಆರೋಪಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳಿಂದ ಮಮತಾ ಪರಾಭವಗೊಂಡಿದ್ದರು. ಈಗ ಮುಖ್ಯಮಂತ್ರಿ ಸ್ಥಾನದಲ್ಲಿರಲು ಉಪಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದೆ.
'ನನ್ನ ದೇಶವು ಬಲಶಾಲಿಯಾಗಬೇಕು ಎಂದು ನಾನು ಬಯಸುತ್ತೇನೆ. ಅಲ್ಲದೆ ನನ್ನೆಲ್ಲ ಶಕ್ತಿಯಿಂದ ತಾಯ್ನಾಡನ್ನು ರಕ್ಷಿಸುವ ಪ್ರಯತ್ನ ಮಾಡಲಿದ್ದೇನೆ. ಭಾರತವನ್ನು ಮತ್ತೊಂದು ತಾಲಿಬಾನ್ ಆಳುವ ದೇಶವಾಗಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ.
'ನಾನು ಮಸೀದಿಗೆ ಭೇಟಿ ನೀಡಿದ್ದೇನೆ. ಗುರುದ್ವಾರಕ್ಕೂ ಭೇಟಿ ಕೊಟ್ಟಿದ್ದೇನೆ. ಎರಡರಲ್ಲೂ ಬಿಜೆಪಿಗೆ ಸಮಸ್ಯೆಯಿದೆ. ಧರ್ಮವನ್ನು ರಾಜಕೀಯಕ್ಕೆ ಎಳೆಯಲು ಬಯಸುವುದಿಲ್ಲ. ನಾನು ಯಾವತ್ತೂ ಸಮುದಾಯಗಳ ನಡುವೆ ಭಿನ್ನತೆಯನ್ನು ಹೊಂದಿಲ್ಲ. ಆದರೆ ಬಿಜೆಪಿಯು ಸಮುದಾಯಗಳ ನಡುವಣ ಸಾಮರಸ್ಯ, ಸಹೋದರತ್ವ ಮತ್ತು ಸಾಮಾಜಿಕ ರಚನೆಯನ್ನು ನಾಶಪಡಿಸುತ್ತಿದೆ' ಎಂದು ಆರೋಪಿಸಿದರು.
'ಬಿಜೆಪಿ ಸರ್ಕಾರವು ಇಡೀ ದೇಶವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ರೈಲು, ವಿಮಾನ ನಿಲ್ದಾಣ, ಬಂದರು... ಹೀಗೆ ಎಲ್ಲವನ್ನೂ ಮಾರಾಟ ಮಾಡಲು ಬಯಸುತ್ತಾರೆ. ದೇಶದ ಮಣ್ಣನ್ನು ಮಾರಾಟ ಮಾಡುವೀರಾ?' ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.