ನವದೆಹಲಿ: ‘ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಇಲಾಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ.
ಈ ಪತ್ರವನ್ನು ಉಲ್ಲೇಖಿಸಿ ಬುಧವಾರ ಸಂಜೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಿಎಸ್ವೈ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಬಿಎಸ್ವೈ ಸರ್ಕಾರದ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಪಕ್ಷವು ಹೇಳುತ್ತಲೇ ಬಂದಿದೆ. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ದಾರೆ' ಎಂದು ಸುರ್ಜೇವಾಲ ಟ್ವೀಟಿಸಿದ್ದಾರೆ.
'ಇದು ಕದ್ದಿರುವ ಜನಾದೇಶದ ಮೂಲಕ ಜನಿಸಿದ ನ್ಯಾಯಸಮ್ಮತವಲ್ಲದ ಸರ್ಕಾರ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವು ವ್ಯಕ್ತಿಯೊಬ್ಬರಿಗೆ ಸೇವೆ ಸಲ್ಲಿಸಲು ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದೆ. ಇದಕ್ಕೆ ಕೊನೆ ಹಾಡಬೇಕಿದೆ' ಎಂದು ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.
'ಕಳೆದ ಒಂದು ವರ್ಷದ ಅವಧಿಯಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನನ್ನ ಗಮನಕ್ಕೆ ತರದೇ ಮುಖ್ಯಮಂತ್ರಿಯವರು ಕೈಗೊಂಡಿದ್ದಾರೆ. ಇದರಿಂದ ಅತ್ಯಂತ ಹಿರಿಯ ಸದಸ್ಯನಾದ ನನಗೆ ತೀವ್ರ ಮುಜುಗರ ಮತ್ತು ನೋವು ಉಂಟಾಗಿದೆ' ಎಂದು ಪತ್ರದಲ್ಲಿ ಈಶ್ವರಪ್ಪ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.