ADVERTISEMENT

ನಿಮ್ಮ ಮೇಲೆ ಒತ್ತಡವಿದೆ: ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ‘ಕೈ’ ಸಂಸದೆಯರು

ಪಿಟಿಐ
Published 9 ಫೆಬ್ರುವರಿ 2026, 10:23 IST
Last Updated 9 ಫೆಬ್ರುವರಿ 2026, 10:23 IST
   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಗೈರುಹಾಜರಾಗಿದ್ದು ಬೆದರಿಕೆಯಿಂದಲ್ಲ, ಭಯದಿಂದ. ಅವರಿಗೆ ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲ’ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ ಸಂಸದೆಯರು ಹೇಳಿದ್ದಾರೆ.

ಸದನಕ್ಕೆ ಪ್ರಧಾನಿ ಗೈರುಹಾಜರಿ ಆಗಿರುವ ವಿಚಾರವಾಗಿ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವುದನ್ನು ಖಂಡಿಸಿರುವ ಅವರು, ಸ್ಪೀಕರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

‘ಪ್ರಧಾನಿ ಮೋದಿ ಅವರ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳಲು ನಿಮ್ಮ ಮೇಲೆ ಆಡಳಿತ ಪಕ್ಷದ ಒತ್ತಡವಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಮಹಿಳಾ ಸಂಸದರ ಮೇಲೆ ಅದರಲ್ಲೂ ಕಾಂಗ್ರೆಸ್‌ ಮಹಿಳಾ ಸಂಸದರ ಮೇಲೆ ನೀವು ಆರೋಪ ಹೊರಿಸಿದ್ದೀರಿ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿಮಣಿ, ಆರ್. ಸುಧಾ, ವರ್ಷಾ ಗಾಯಕ್ವಾಡ್ ಮತ್ತು ಜ್ಯೋತ್ಸ್ನಾ ಮಹಾಂತ್ ಸೇರಿ ಮಹಿಳಾ ಸಂಸದರು ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಜನವಿರೋಧಿ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಡಿ ಅವರಿಂದ ಉತ್ತರದಾಯಿತ್ವವನ್ನು ಕೋರಿದ್ದರಿಂದಲೇ ನಮ್ಮನ್ನು ಗುರಿ ಮಾಡಲಾಗಿದೆ. ಅವರು ಸದನಕ್ಕೆ ಗೈರುಹಾಜರಾಗಿದ್ದು ಯಾವುದೇ ಬೆದರಿಕೆಯಿಂದಲ್ಲ, ಭಯದಿಂದ’ ಎಂದು ಹೇಳಿದ್ದಾರೆ.

‘ಅವರಿಗೆ (ಪ್ರಧಾನಿ) ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯವಿರಲಿಲ್ಲ. ನಾವು ಕಾಂಗ್ರೆಸ್‌ ಸಂಸದರಾಗಿದ್ದು, ಪ್ರೀತಿ, ಶಾಂತಿ, ಸಾಂವಿಧಾನಿಕ ಮೌಲ್ಯ ಮತ್ತು ಮಾನವ ಘನತೆಯನ್ನು ಪ್ರತಿಪಾದಿಸುವ ಪಕ್ಷ ನಮ್ಮದು. ನಮ್ಮ ಪಕ್ಷ ಹಿಂಸೆ ಮತ್ತು ಬೆದರಿಕೆಯಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಧೈರ್ಯಶಾಲಿ ಚುನಾಯಿತ ಪ್ರತಿನಿಗಳಾಗಿದ್ದು, ಬೆದರಿಕೆಯಿಂದ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

‘ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮತ್ತು ರಾಷ್ಟ್ರದ ಒಳಿತಿಗಾಗಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದ ಒಬ್ಬ ವ್ಯಕ್ತಿಯಾಗಿ ಇತಿಹಾಸವು ನಿಮ್ಮನ್ನು ನೆನಪಿಕೊಳ್ಳಬೇಕೇ ವಿನಃ ಸಾಂವಿಧಾನಿಕ ಮೌಲ್ಯಗಳನ್ನು ಬುಡಮೇಲು ಮಾಡುವ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಮಾಡುವವರ ಒತ್ತಡಕ್ಕೆ ಮಣಿದ ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ನೆನಪಿಸಿಕೊಳ್ಳುವುದು ಬೇಡ’ ಎಂದಿದ್ದಾರೆ.

‘ಸ್ಪೀಕರ್’ ಹುದ್ದೆಯು ಸಂಸತ್ತಿನ ಘನತೆಯನ್ನು ರಕ್ಷಿಸಲು, ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಲಾದ ಸಾಂವಿಧಾನಿಕ ಸ್ಥಾನವಾಗಿದೆ’ ಎಂದು ಹೇಳಿದ್ದಾರೆ.

ಹಿನ್ನಲೆ:

ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ‘ಕಾಂಗ್ರೆಸ್‌ ಸದಸ್ಯರು ಅದರಲ್ಲಿಯೂ ಮಹಿಳಾ ಸದಸ್ಯರು ದುರದೃಷ್ಟಕರ ಘಟನೆಗಳಿಗೆ ಕಾರಣವಾಗುವ ಅನಿರೀಕ್ಷಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇದ್ದ ಕಾರಣ ಸದನಕ್ಕೆ ಬಾರದಂತೆ ಪ್ರಧಾನಿ ಅವರಿಗೆ ನಾನೇ ಮನವಿ ಮಾಡಿದ್ದೆ’ ಎಂದು ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು ಸದನಕ್ಕೆ ತಿಳಿಸಿದ್ದರು.

ಈ ಹೇಳಿಕೆಗೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.