ಮಂಗಳೂರು: ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಜಾಕೀರ್ ಹಾಗೂ ಶಫಿಕ್ ಅವರನ್ನು ಬಂಧಿಸಿದ್ದೇವೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಾರುವಿನಲ್ಲಿರುವ ಪ್ರವೀಣ್ ಅವರ ಮನೆಗೆ ಗುರುವಾರ ಭೇಟಿ ನೀಡಿ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ಅವರು ಮಾಹಿತಿ ನೀಡಿದರು.
ಪ್ರವೀಣ್ ಅವರ ಪತ್ನಿ ನೂತನಾ, ತಂದೆ ಶೇಖರ ಪೂಜಾರಿ, ಅಮ್ಮ ರತ್ನಾವತಿ ಅವರಿಂದ ಹೆಚ್ಚಿನ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಲೋಕ್ ಕುಮಾರ್, 'ಹತ್ಯೆ ಮಾಡಿದ ಇಬ್ಬರು 'ಆರೋಪಿಗಳನ್ನು ಬಂಧಿಸಿದ್ದೇವೆ. ನಮಗೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದಲ್ಲಿ ಇನ್ನಷ್ಟು ವಿಚಾರಣೆ ಸಲುವಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ನಡೆಸಬೇಕಿದೆ. ಆಳವಾಗಿ ತನಿಖೆ ನಡೆಸಿದ ಬಳಿಕವಷ್ಟೇ ಅವರ ಜಾಲ ಎಷ್ಟು ವ್ಯಾಪಿಸಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ. ಯಾವುದಾದರೂ ಸಂಘಟನೆಯ ಕೈವಾಡ ಇದೆಯೇ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂಬುದು ತಿಳಿಯಲಿದೆ. ಶೀಘ್ರವೇ ಇದು ಬಹಿರಂಗವಾಗಲಿದೆ'' ಎಂದರು.
ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಪ್ರವೀಣ್ ಕುಟುಂಬಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಅಕ್ರೋಶ ತೋಡಿಕೊಂಡರು.
ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನಚಂದ್ರ ಜೋಗಿ, ಸುಬ್ರಹ್ಮಣ್ಯ ನಗರ ಠಾಣೆಯ ಪಿಎಸ್ಐ ಜಂಬೂರಾಜ್ ಮಹಾಜನ್, ಪುತ್ತೂರು ನಗರ ಠಾಣೆಯ ಪಿಎಸ್ಐ ರಾಜೇಶ್ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೆಬಲ್ ಬಾಲಕೃಷ್ಣ ಹಾಗೂ ಕಾನ್ಸ್ಟೆಬಲ್ ಮಂಜುನಾಥ ಅವರು ಕಾರ್ಯಕರ್ತರ ಮೇಲೆ ವಿನಾ ಕಾರಣ ಹಲ್ಲೆ ನಡೆಸಿದ್ದಾರೆಗ. ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಪ್ರವೀಣ್ ಕುಟುಂಬಸ್ಥರು ಅಲೋಕ್ ಕುಮಾರ್ ಅವರನ್ನು ಒತ್ತಾಯಿಸಿದರು.
ಮಂಗಳೂರು ಕಮಿಷನರೇಟ್ ಪೊಲೀಸರು ಕೂಡಾ ದಜ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಳೇ ಆರೋಪಿಗಳನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.