ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳದ ವೇಳೆಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನನ್ನು ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಂಡಿತ್ತು. ಭೂಮಿಗೆ ಬದಲಾಗಿ ಪರಿಹಾರ ಪಡೆದ ರೈತರು ಬೇರೆ ಊರುಗಳಿಗೆ ತೆರಳಿ ನೆಲೆಕಂಡುಕೊಂಡಿದ್ದರು. ಆದರೆ ಆನಂತರ ರೈತರುಅನುಭವಿಸಿದ ವೇದನೆಯನ್ನು ಸಾರುವ ಜಾನಪದ ಶೈಲಿಯ ಹಾಡೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜಲಾಶಯದ ಹಿನ್ನೀರಿನಲ್ಲಿ ಬೆರೆತು ಹೋಗಿರುವ ಎಷ್ಟೋ ರೈತರ ಕಣ್ಣೀರ ಕತೆಯನ್ನು ಸಾರುವ ಈ ಹಾಡು, ‘ಕಣ್ಣಾನ ನೀರು ತುಂಬಿದ ಹೊಳೆಯಂಗೆ ಹರಿದು ಹೋಯಿತಲ್ಲಾ..’ ಎಂದು ಆರಂಭವಾಗುತ್ತದೆ.
ಪಸಲಿನಿಂದ ಬರುತ್ತಿದ್ದ ಆದಾಯದಲ್ಲಿ ಬಿತ್ತನೆಗೆ ಮಾಡಿದ್ದ ಖರ್ಚು, ಸಾಲವನ್ನು ಕಳೆದು ಉಳಿದದ್ದರಲ್ಲಿ ಸಂಸಾರ ನಡೆಸುತ್ತಿದ್ದ ರೈತಾಪಿಗೆ ಭೂಸ್ವಾಧೀನಕ್ಕೆ ‘ಪರಿಹಾರ’ ರೂಪದಲ್ಲಿ ದೊಡ್ಡ ಮೊತ್ತ ನೀಡಲಾಗಿತ್ತು.ಫಲವತ್ತಾದ ಭೂಮಿಯನ್ನು ಕಳೆದುಕೊಂಡು, ಅನ್ಯ ಊರಿಗೆ ಅಪರಿಚಿತರಂತೆ ತೆರಳಿ ಅಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟದ ಕೆಲಸ.ಏಕಾಏಕಿ ಬಂದ ಅಧಿಕ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದೂ ಮತ್ತೊಂದು ಸವಾಲು. ಹೆಚ್ಚಿನವರು ಅದರಲ್ಲಿ ಸೋತು,ಇತ್ತ ಫಲವತ್ತಾದ ಭೂಮಿಯೂ ಇಲ್ಲ, ಅತ್ತ ಹಣವೂ ಉಳಿಯಲಿಲ್ಲ ಎನ್ನುವಂತ ಸ್ಥಿತಿಗೆ ಸಿಲುಕಿದ್ದರು. ಈ ರೀತಿಯಾಗಿ ದಿಕ್ಕೆಟ್ಟ ಹಲವರ ಕತೆಗಳನ್ನು ಈ ಹಾಡಿನಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಹಾಡನ್ನು ವೀಕ್ಷಿಸಿದ ನೆಟ್ಟಿಗರು, ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಮೊದಲು ಮುಂದೆ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿಡಿಯೊ ನೋಡಲು ಇಲ್ಲಿ ಕ್ಲಿಕ್ಕಿಸಿ:https://bit.ly/2YUZdmn
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.