ವಿಜಯಪುರ: ಕೊರೊನಾ ಲಾಕ್ಡೌನ್ನಿಂದ ಬಂದ್ಮಾಡಲಾಗಿರುವ ದ್ರಾಕ್ಷಿ ಆನ್ಲೈನ್ ಟ್ರೇಡಿಂಗ್ ಅನ್ನು ತಕ್ಷಣ ಪುನರಾರಂಭಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಆನ್ಲೈನ್ ಟ್ರೇಡಿಂಗ್ ಬಂದ್ ಮಾಡಬಾರದು. ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಒಣ ದ್ರಾಕ್ಷಿ ತಯಾರಿಕೆಗೆ ಅಗತ್ಯ ಇರುವ ಡಿಪ್ಪಿಂಗ್ ಆಯಿಲ್ ಕೊರತೆಯಾಗದಂತೆ ಹೊರ ರಾಜ್ಯಗಳಿಂದ ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಆದರೆ, ಈ ಹಣ್ಣು ತಿಂದರೆ ಕೊರೊನಾ ಬರುತ್ತದೆ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಜನರು ಕಿವಿಗೊಡಬಾರದು. ಕಲ್ಲಂಗಡಿ, ಸೌತೆಕಾಯಿ ಹೆಚ್ಚು ತಿನ್ನುವುದರಿಂದ ಮನುಷ್ಯನ ದೇಹದಲ್ಲಿ ಹ್ಯುಮಿಡಿಟಿ ಹೆಚ್ಚಾಗಿ, ಕೊರೊನಾ ಬಾರದಂತೆ ತಡೆಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಬೀಜ, ರಸಗೊಬ್ಬರ, ಔಷಧ ಸಾಕಷ್ಟು ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.