ಸತೀಶ ಜಾರಕಿಹೊಳಿ
ಬೆಂಗಳೂರು: 'ನಮ್ಮದೇ ಗಾಡಿ ಫುಲ್ ಇದೆ. ಜೆಡಿಎಸ್ 18 ಶಾಸಕರನ್ನು ತೆಗೆದುಕೊಂಡು ನಾವೇನು ಮಾಡೋಣ' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಓವರ್ ಲೋಡೆಡ್ ಇದ್ದರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಇಲ್ಲಿಯೇ ಅಧ್ಯಕ್ಷ ಆಗಬೇಕು. ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೇಯ್ಟಿಂಗ್ ಲಿಸ್ಟ್ನಲ್ಲಿ ಇದ್ದೇವೆ ಇಲ್ಲಿಯೇ ಕಾಯ್ತೇವೆ' ಎಂದರು.
'ನಾನು ಆರ್ಎಸಿ ಟಿಕೆಟ್ನಲ್ಲಿದ್ದೇನೆ. ಇಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿಯೇ ಕಾಯ್ತೇನೆ. ಯಾರಾದ್ರೂ ಮೆಜೆಸ್ಟಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು' ಎಂದರು.
'ಎಲ್ಲರೂ ಆರ್ಎಸಿ ಟಿಕೆಟ್ ಇಟ್ಟುಕೊಂಡೇ ಕಾಯ್ತಿದ್ದಾರೆ. ಇಲ್ಲಿ ಶಿಂಧೆ, ಅಜಿತ್ ಪವರ್ ಯಾರೂ ಇಲ್ಲ. ಆ ಸಾಮರ್ಥ್ಯ ಇಲ್ಲಿ ಯಾರಿಗೂ ಇಲ್ಲ' ಎಂದರು .
'ಸಚಿವ ಕೆ. ಎನ್. ರಾಜಣ್ಣ ಹನಿಟ್ರ್ಯಾಪ್ ಕೇಸ್ ಬೇರೆ. ರಾಜೇಂದ್ರ ಕೇಸ್ ಬೇರೆ. ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ರಾಜೇಂದ್ರ ಕೇಸ್ ಸ್ವಲ್ಪ ಹಳೆಯದು, ಎರಡು ತಿಂಗಳು ಮೊದಲಿನದು. ಅವರಿಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕ್ತಿದ್ರು ಅನ್ನೋದು. ಹನಿ ಟ್ರ್ಯಾಪ್ಗೂ ಇದಕ್ಕೂ ಸಂಬಂಧ ಇಲ್ಲ' ಎಂದರು.
'ಅಧಿವೇಶನ ಮುಗಿದ ಬಳಿಕ ನಾನು ರಾಜಣ್ಣ ಅವರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಯಾಕೆ ತಣ್ಣಗಾದರು ಎಂಬ ಬಗ್ಗೆ ಚರ್ಚೆ ಮಾಡ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು. ಇಲ್ಲದಿದ್ದರೆ ಹೋದಲ್ಲಿ ಬಂದಲ್ಲಿ ಮತ್ತೆ ಹನಿಟ್ರ್ಯಾಪೇ ಚರ್ಚೆ ಆಗುತ್ತದೆ' ಎಂದರು.
ಸರ್ಕಾರದ ವಿರುದ್ಧ ಗುತ್ತಿಗೆದಾರರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, 'ಹಂತಹಂತವಾಗಿ ಬಿಲ್ ಕ್ಲಿಯರ್ ಮಾಡ್ತಿದ್ದೇವೆ. ನಮ್ಮ ಇಲಾಖೆಯದ್ದು ಯಾವುದೂ ಪೆಂಡಿಂಗ್ ಇಲ್ಲ. ನಾವು ಎಲ್ಲವನ್ನೂ ಕೊಡ್ತಿದ್ದೇವೆ' ಎಂದರು.
ದಲಿತ ಸಮಾವೇಶ ಆಯೋಜಿಸುವ ಬಗ್ಗೆ ಮಾತನಾಡಿದ ಅವರು, 'ಸುರ್ಜೇವಾಲಾ ರಾಜ್ಯಕ್ಕೆ ಬರಲಿದ್ದಾರೆ. ಆಗ ಅವರ ಜೊತೆ ಚರ್ಚೆ ಮಾಡ್ತೇವೆ. ವರಿಷ್ಠರ ಜೊತೆ ಇದನ್ನು ಮಾತನಾಡಿಲ್ಲ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.